ಮುಂಬೈ, ಅ.19: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಸರಣಿ ಆಯೋಜನೆ ಬಗ್ಗೆ ಮತ್ತೊಮ್ಮೆ ಬಿಸಿಸಿಐ ಹಾಗೂ ಪಿಸಿಬಿ ಮಾತುಕತೆ ನಡೆಸಲು ಮುಂದಾಗಿರುವುದನ್ನು ಖಂಡಿಸಿ ಶಿವಸೇನಾ ಭಾರಿ ಪ್ರತಿಭಟನೆ ನಡೆಸಿದೆ. ಬಿಸಿಸಿಐ ಕೇಂದ್ರ ಕಚೇರಿಗೆ ನುಗ್ಗಿ ಶಶಾಂಕ್ ಮನೋಹರ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವಿನ ಮಾತುಕತೆಗೆ ಶಿವಸೇನಾ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. [ಭಾರತ-ಪಾಕ್ ಕ್ರೀಡಾ ಸಮರ ರದ್ದು!]

ಶಿವಸೇನಾ ಪ್ರತಿಭಟನೆ ನಂತರ ಸಭೆ ರದ್ದು ಪಡಿಸಲಾಗಿದೆ. ಪಿಸಿಬಿ ಚೇರ್ಮನ್ ಶಹರ್ಯಾರ್ ಖಾನ್ ಹಾಗೂ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ವಿರುದ್ಧ ಘೋಷಣೆ ಕೂಗಿದ್ದಾರೆ.
ಮುಂದಿನ 10 ರಿಂದ 12 ದಿನಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಟೂರ್ನಿ ಆಯೋಜನೆ ಅಥವಾ ರದ್ದುಪಡಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವಂತೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೆ ಕೇಳಿಕೊಳ್ಳಲಾಗಿತ್ತು. ಅದರಂತೆ ಈ ಬಗ್ಗೆ ಮಾತುಕತೆ ನಡೆಸಲು ಅಕ್ಟೋಬರ್ 19ರಂದು ಸಭೆ ನಡೆಸಲು ನಿರ್ಧರಿಸಲಾಗಿತ್ತು ಎಂದು ಪಿಸಿಬಿ ಪ್ರತಿಕ್ರಿಯಿಸಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಬಿಸಿಸಿಐ ಮುಂಬರುವ ಡಿಸೆಂಬರ್, ಜನವರಿಯಲ್ಲಿ ಏಕದಿನ ಪಂದ್ಯ ಆಯೋಜಿಸಲು ಮುಂದಾಗಿತ್ತು. ಅದರೆ, ಭಾರತದೊಂದಿಗೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯ ಆಡಲು ಪಾಕಿಸ್ತಾನ ಬಯಸುವುದಿಲ್ಲ ಎಂದು ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಜ್ ಅಜೀಜ್ ಘೋಷಿಸಿದ್ದರು.
ಬಿಸಿಸಿಐ ಹಾಗೂ ಪಿಸಿಬಿ ನಿರ್ಣಯ ತೆಗೆದುಕೊಳ್ಳುವ ವಿಚಾರವಲ್ಲ, ಉಭಯ ದೇಶಗಳ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದರು. ಒಟ್ಟಾರೆ, ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಯಾವಾಗೋ ನಡೆಯುವುದೋ ಸ್ಪಷ್ಟವಾಗಿ ಯಾರೋ ಹೇಳಲು ಸ್ಥಿತಿಯಲ್ಲಿಲ್ಲ ಎಂದು ಈ ಹಿಂದೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)