ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್ ಟಿ20 ಟೂರ್ನಿಯ ಮಹತ್ವದ ಪಂದ್ಯ ಇಂದು ದುಬೈನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಉಭಯ ತಂಡಗಳು ತಾವಾಡಿರುವ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರಿಂದ ಎರಡನೇ ಗೆಲುವು ದಾಖಲಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ವೇಳೆ ಸಾಮಾಜಿಕ ತಾಣದಲ್ಲಿ ಈ ಪಂದ್ಯಕ್ಕೆ ಭಾರೀ ವಿರೋಧ ವ್ಯಕ್ತಾವಾಗಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಮೊದಲು ವಿಶ್ವ ಚಾಂಪಿಯನ್ಸ್ ಲೆಜೆಂಡ್ನಲ್ಲಿ ಭಾಗವಹಿಸಿದ್ದವು. ಇದೇ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿದಾಗ, ಭಾರತ ಉಪಾಂತ್ಯ ಪಂದ್ಯವನ್ನು ಬೈ ಕಾಟ್ ಮಾಡಿತ್ತು. ಹೀಗಾಗಿ ಈ ಬಾರಿಯೂ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬಂದಿದೆ. ಅಲ್ಲದೆ ಒಂದು ವೇಳೆ ಪಂದ್ಯ ಆಯೋಜಿಸದರೆ ಯಾರು ಪಂದ್ಯವನ್ನು ನೋಡಬಾರದು ಎಂಬ ಕೂಗು ಕೇಳಿ ಬಂದಿದೆ. ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಸಂತ್ರಸ್ಥರಿಗಾಗಿ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ.

ಭಾರತ ಮಾತೆಯ ಕಿರೀಟದಂತಿರುವ ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ಅಟ್ಟಾಹಸ ಮೆರೆದಿದ್ದರು. ಈ ವೇಳೆ ಭಾರತೀಯರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದ ಪಹಲ್ಗಾಮ್ನಲ್ಲಿ ಉಗ್ರರರು 26ಕ್ಕೂ ಹೆಚ್ಚು ಅಮಾಯಕರನ್ನು ಕೊಂದಿದ್ದರು. ಇದರಿಂದ ಉಭಯ ದೇಶಗಳ ನಡುವೆ ಉದ್ವಿಗ್ನತೆ ತೀವ್ರಗ ಗೊಂಡಿತ್ತು. ಅಲ್ಲದೆ ಭಾರತ ಆಪರೇಷನ್ ಸಿಂಧೂರ ಎಂಬ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಪಾಕ್ಗೆ ಭರ್ಜರಿ ತಿರುಗೇಟನ್ನು ಸಹ ನೀಡಿತ್ತು.
ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸರಣಿಗಳು ರದ್ದಾಗಿ, ಬಹುವರ್ಷಗಳೇ ಕಳೆದಿವೆ. ಈ ವೇಳೆ ಭಾರತ ಹಾಗೂ ಪಾಕ್ ತಂಡಗಳು ಐಸಿಸಿ ಟೂರ್ನಿ ಹಾಗೂ ಬಹು ರಾಷ್ಟ್ರೀಯ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ. ಅಲ್ಲದೆ ಉಭಯ ತಂಡಗಳೂ ಸಹ ಒಂದೇ ಗುಂಪಿನಲ್ಲಿ ಬರುವುದರಿಂದ ಸಾಮಾನ್ಯವಾಗಿ ಕಾವು ಆರಂಭದಲ್ಲೇ ಇರುತ್ತದೆ. ಈ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿ ಕಾಯುತ್ತಿದ್ದಾರೆ. ಇನ್ನು ಭಾರತ ಹಾಗೂ ಪಾಕ್ ನಡುವಣ ಪಂದ್ಯದ ಟಿಕೆಟ್ಗಳು ಹೇಳಿಕೊಳ್ಳುವ ರೀತಿ ಮಾರಾಟವಾಗಿಲ್ಲ ಎಂದು ತಿಳಿದು ಬಂದಿದೆ. ಈ ಮೂಲಕ ದುಬೈನಲ್ಲಿ ಆಯೋಜಿಸಲಾಗಿರುವ ಏಷ್ಯಾ ಕಪ್ ಟಿ20 ಟೂರ್ನಿಗೆ ಜನರ ನಿರುತ್ಸಾಹ ಕಂಡಂತೆ ಆಗಿದೆ.