ನವದೆಹಲಿ, ಮಾರ್ಚ್ 09: ಭಾರತ ಹಾಗೂ ಪಾಕಿಸ್ತಾನ ನಡುವಿನ ಕುತೂಹಲದ ಪಂದ್ಯ ಕೊನೆಗೂ ಧರ್ಮಶಾಲದಿಂದ ಕೋಲ್ಕತ್ತಾಗೆ ಶಿಫ್ಟ್ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಬಗ್ಗೆ ಇದ್ದ ಅನುಮಾನಗಳನ್ನು ಬುಧವಾರ (ಮಾರ್ಚ್ 09) ಪರಿಹರಿಸಿದೆ.
ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ನಿಗದಿಯಾಗಿದ್ದ ಮಾರ್ಚ್ 19ರ ವಿಶ್ವ ಟಿ20 ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಐಸಿಸಿಗೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಐಸಿಸಿ ಒಪ್ಪಿಗೆ ನೀಡಿದ್ದು, ಭದ್ರತಾ ಹಿತದೃಷ್ಟಿಯಿಂದ ಪಂದ್ಯವನ್ನು ಕೋಲ್ಕತ್ತಾಗೆ ಪಂದ್ಯ ಶಿಫ್ಟ್ ಮಾಡಲಾಗಿದೆ.
ಪಾಕಿಸ್ತಾನಿ ಭಯೋತ್ಪಾದಕರು ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆಸಿದ ದಾಳಿಯಲ್ಲಿ ಹಿಮಾಚಲ ಪ್ರದೇಶದ ಯೋಧರು ಮೃತಪಟ್ಟಿದ್ದರು. ಹೀಗಾಗಿ ಇಂಡೋ ಪಾಕ್ ಪಂದ್ಯಕ್ಕೆ ಹಿಮಾಚಲ ಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಕೋರಿ ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಪತ್ರ ಬರೆದಿತ್ತು.