ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ 200ನೇ ಟಿ20 ಪಂದ್ಯವನ್ನಾಡುತ್ತಿದೆ. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಭಾರತ ವಿಶೇಷ ಮೈಲಿಗಲ್ಲೊಂದನ್ನು ಸಾಧಿಸಿದಂತಾಗಲಿದೆ. ಕ್ರಿಕೆಟ್ ಇತಿಹಾಸದ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಭಾರತ ಟಿ20 ಮಾದರಿಯಲ್ಲಿಯೂ ಯಶಸ್ವಿ ತಂಡಗಳಲ್ಲಿ ಒಂದಾಗಿದೆ.
ಟ್ರಿನಿಡಾಡ್ನ ಟರೌಬಾದಲ್ಲಿರುವ ಬ್ರಿಯಾನ್ ಲಾರಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನಾಡುತ್ತಿದೆ. ಈ ವೆಸ್ಟ್ ಇಂಡಿಸ್ ಪ್ರವಾಸ ಭಾರತಕ್ಕೆ ಐತಿಹಾಸಿಕವೆನಿಸಿದ್ದು ಇದಕ್ಕೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 100ನೇ ಟೆಸ್ಟ್ ಪಂದ್ಯವನ್ನು ಆಡಿದ ಮೈಲಿಗಲ್ಲು ಸಾಧಿಸಿತ್ತು.

ಇನ್ನು ಭಾರತ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 100ನೇ ಪಂದ್ಯವನ್ನು ಆಡಿದ್ದು 2018ರಲ್ಲಿ. ಐರ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಿತ್ತು. ಈ ಪೈಕಿ ಮೊದಲ ಪಂದ್ಯದ ಭಾರತದ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿತ್ತು. ನಿರೀಕ್ಷೆಯಂತೆಯೇ ಈ ಪಂದ್ಯವನ್ನು ಭಾರತ 76 ರನ್ಗಳ ಅಂತರದಿಂದ ಗೆದ್ದಿದ್ದು ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಆ ಐತಿಹಾಸಿಕ ಪಂದ್ಯದಲ್ಲಿ ಭಾರತದ ಪರವಾಗಿ ಆಡಿದ ಆಟಗಾರರು ಯಾರ ಬಗೆಗಿನ ಮಾಹಿತಿ ಇಲ್ಲಿದೆ.
ಟೀಮ್ ಇಂಡಿಯಾದ ಬ್ಯಾಟರ್ಗಳು ಹಾಗೂ ಆಲ್ರೌಂಡರ್ಗಳು
ಭಾರತ ತನ್ನ 100ನೇ ಟಿ20 ಪಂದ್ಯದಲ್ಲಿ ಐವರು ಸ್ಪೆಶಲಿಸ್ಟ್ ಬ್ಯಾಟರ್ಗಳು ಹಾಗೂ ಇಬ್ಬರು ಆಲ್ರೌಂಡರ್ಗಳೊಂದಿಗೆ ಕಣಕ್ಕಿಳಿದಿದ್ದತ್ತು. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿದಿದ್ದು ಇಬ್ಬರು ಕೂಡ ಅರ್ಧ ಶತಕ ಸಿಡಿಸಿ ಅಬ್ಬರದ ಪ್ರದರ್ಶನ ನೀಡಿದ್ದರು. ರೋಹಿತ್ ಶರ್ಮಾ 97 ರನ್ ಸಿಡಿಸಿ ಮೂರು ರನ್ಗಳ ಅಂತರದಿಂದ ಶತಕವಂಚಿತವಾಗಿದ್ದರು.
ಇನ್ನು ಈ ಪಂದ್ಯದಲ್ಲಿ ಸುರೇಶ್ ರೈನಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರೆ ಧೋನಿ ನಾಳ್ಕನೇ ಕ್ರಮಾಂಕದಲ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಯಾರೊಬ್ಬರು ಕೂಡ ಈ ಪಂದ್ಯದಲ್ಲಿ ಮಿಂಚಲು ವಿಫಲವಾಗಿದ್ದರು. ನಿಗದಿತ 20 ಓವರ್ಗಳಲ್ಲಿ ಆರಂಬಿಕರ ಅಬ್ಬರದ ಕಾರಣದಿಂದಾಗಿ ಭಾರತ 208 ರನ್ಗಳನ್ನು ಕಲೆಹಾಕಿತ್ತು.
ಈ ಆಟಗಾರರ ಪೈಕಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಇನ್ನು ಕೂಡ ಭಾರತ ತಂಡದ ಭಾಗವಾಗಿದ್ದರೆ ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಧವನ್ ಹಾಗೂ ಮನೀಶ್ ಪಾಂಡೆ ತಂಡದಿಂದ ಹೊರಬಿದ್ದಿದ್ದಾರೆ.
ಬೌಲರ್ಗಳು: ಭುವನೇಶ್ವರ್, ಕುಲ್ದೀಪ್, ಬೂಮ್ರಾ, ಚಾಹಲ್
ಇನ್ನು ಈ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಇಬ್ಬರು ಸ್ಪಿನ್ನರ್ಗಳು ಹಾಗೂ ಇಬ್ಬರು ವೇಗಿಗಳು ಸ್ಥಾನ ಪಡೆದಿದ್ದರು. ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ವೇಗದ ಬೌಲರ್ಗಳಾಗಿದ್ದರೆ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಸ್ಪಿನ್ನರ್ಗಳಾಗಿ್ದರು. ಕುಲ್ದೀಪ್ ಯಾದವ್ ನಾಲ್ಕು ವಿಕೆಟ್ಗಳನ್ನು ಕಿತ್ತಿದ್ದರು. ಈ ಆಟಗಾರರ ಪೈಕಿ ಬೂಮ್ರಾ, ಕುಲ್ದೀಪ್ ಹಾಗೂ ಚಾಹಲ್ ಇನ್ನು ಕೂಡ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದರೆ ಭುವನೇಶ್ವರ್ ಕುಮಾರ್ ಕಳೆದ ನ್ಯೂಜಿಲೆಂಡ್ ಸರಣಿಯ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ.