
ನವದೆಹಲಿ, ಫೆಬ್ರವರಿ 22: ಕ್ರಿಕೆಟ್ ವಿಶ್ವಕಪ್ 2019ರಲ್ಲಿ ಪಾಕಿಸ್ತಾನ ವಿರುದ್ಧ ಆಡದಿರಲು ಭಾರತ ತಂಡ ಸಿದ್ಧವಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಮೂಲಗಳ ಪ್ರಕಾರ, ಭಾರತ ಸರ್ಕಾರವು ಪಾಕಿಸ್ತಾನ ವಿರುದ್ಧ ಈ ಬಾರಿಯ ವಿಶ್ವಕಪ್ನಲ್ಲಿ ತಂಡವನ್ನು ಕಣಕ್ಕಿಳಿಸದಂತೆ ಬಿಸಿಸಿಐಗೆ ಸೂಚಿಸಿದೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪುಲ್ವಾಮಾ ಎಂಬಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ದಾಳಿಗೆ ಪಾಕ್ ಕಾರಣ ಎಂದು ನಂಬಲಾಗಿರುವುದರಿಂದ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಆಡಕೂಡಬಾರದು ಎಂಬ ಮಾತುಗಳು ಭಾರತದ ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿದ್ದವು.
ಹೀಗಾಗಿ ನಾಕೌಟ್ ಹಂತದ ಪಂದ್ಯಗಳವರೆಗಾದರೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗದಂತೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ಸಾಧ್ಯವೇ ಎಂದು ಐಸಿಸಿಯನ್ನು ಕೋರುವ ಆಯ್ಕೆಯನ್ನೂ ಬಿಸಿಸಿಐ ಇಟ್ಟುಕೊಂಡಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಭಾರತ ಈ ನಿಲುವು ತಾಳಿದರೆ ಪಾಕಿಸ್ತಾನ, ಐಸಿಸಿ ಮತ್ತು ಟೂರ್ನಿಗೆ ಸಂಬಂಧಿಸಿದ ಎಲ್ಲಾ ಪ್ರಾಯೋಜಕರ ಮೇಲೆ ಒತ್ತಡ ಬೀಳಲಿದೆ. ಇದು ಭಾರತದ ಕ್ರಿಕೆಟ್ ರಂಗಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಆದರೆ ಇದು ಸದ್ಯಕ್ಕೆ ಮೂಲಗಳಿಂದ ಲಭಿಸಿದ ಮಾಹಿತಿ. ಬಿಸಿಸಿಐ ಇಂದು (ಫೆಬ್ರವರಿ 22) ಈ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸುವುದರಲ್ಲಿದೆ.