

ವಿಶಾಖಪಟ್ಟಣ, ಅಕ್ಟೋಬರ್ 23: ಆಂಧ್ರಪ್ರದೇಶದ ವಿಷಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 24) ನಡೆಯಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಬಿಸಿಸಿಐ 12 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಿದೆ.
ಗುವಾಹಟಿಯಲ್ಲಿ ನಡೆದಿದ್ದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿತ್ತು. ಅದೂ ವೆಸ್ಟ್ ಇಂಡೀಸ್ ನೀಡಿದ್ದ 323 ಗರಿಷ್ಠ ರನ್ ಗುರಿಯನ್ನು 42.1 ಓವರ್ ನಲ್ಲೇ ತಲುಪಿ ಆಹ್ವಾನಿತರಿಗೆ ಸೋಲುಣಿಸಿತ್ತು. ದ್ವಿತೀಯ ಏಕದಿನವನ್ನೂ ಗೆದ್ದುಕೊಳ್ಳುವ ಉಮೇದಿನಲ್ಲಿ ವಿರಾಟ್ ಕೊಹ್ಲಿ ಬಳಗವಿದೆ.
ಟೆಸ್ಟ್ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡ ಬ್ಲೂಬಾಯ್ಸ್ ತಂಡ ಏಕದಿನ ಸರಣಿಯಲ್ಲೂ 1-0ಯ ಮುನ್ನಡೆಯಲ್ಲಿದೆ. ಮೊದಲ ಏಕದಿನದಲ್ಲಿ ವಿಂಡೀಸ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರೂ ಕೊಹ್ಲಿ-ರೋಹಿತ್ ಜೋಡಿ 240+ ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ದ್ವಿತೀಯ ಪಂದ್ಯದಲ್ಲೂ ವಿಂಡೀಸ್ ಭಾರತಕ್ಕೆ ಸವಾಲಿನ ಗುರಿಯನ್ನೇ ನೀಡುವ ಸಂಭವವಿದೆ.
ಮೊದಲ ಏಕದಿನದಲ್ಲಿದ್ದ ಭಾರತ ತಂಡವೇ ದ್ವಿತೀಯ ಪಂದ್ಯದಲ್ಲೂ ಸ್ಥಾನ ಪಡೆದುಕೊಂಡಿದೆ. ಪಂದ್ಯ ಬುಧವಾರ (ಅಕ್ಟೋಬರ್ 24) 1.30pmಗೆ ಆರಂಭಗೊಳ್ಳಲಿದ್ದು, ಸ್ಟಾರ್ ನೆಟ್ವರ್ಕ್ ಚಾನೆಲ್ ನೇರಪ್ರಸಾರಗೊಳಿಸಲಿದೆ.
ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ಶಿಖರ್ ಧವನ್, ರೋಹಿತ್ ಶರ್ಮಾ, ಅಂಬಾಟಿ ರಾಯುಡು, ರಿಷಬ್ ಪಂತ್, ಎಂಎಸ್ ಧೋನಿ (ವಿ.ಕೆ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್.