1. ರೋಹಿತ್ ಶರ್ಮಾ
ಕಳೆದ ತಿಂಗಳು ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ, ಬರೋಬ್ಬರಿ 5 ಶತಕಗಳನ್ನು ಸಿಡಿಸಿ ಹಲವು ವಿಶ್ವ ದಾಖಲೆಗಳನ್ನು ನುಚ್ಚು ನೂರು ಮಾಡಿದ್ದರು. ಇದೀಗ ಅದೇ ಲಯ ಕಾಯ್ದುಕೊಂಡು ವಿಂಡೀಸ್ ವಿರುದ್ಧದ ಸರಣಿಯಲ್ಲಿ ತಮ್ಮ ಖಾತೆಗೆ ಮತ್ತಷ್ಟು ಶತಕಗಳನ್ನು ಜೋಡಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದು, ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
2. ಶಿಖರ್ ಧವನ್
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯಗಳಲ್ಲೂ ಶಿಖರ್ ಧವನ್ ಕಣಕ್ಕಿಳಿದರೂ ಗಮನಾರ್ಹ ಪ್ರದರ್ಶನವೇನೂ ನೀಡದೆ ಕ್ರಮವಾಗಿ 1, 23 ಮತ್ತು 27 ರನ್ಗಳನ್ನು ಗಳಿಸಿದ್ದಾರೆ. ಅಂದಹಾಗೆ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದ ಧವನ್ ಬಳಿಕ ಹೆಬ್ಬೆರಳಿನ ಗಾಯದ ಸಮಸ್ಯೆ ಎದುರಿಸಿ ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಗುಣಮುಖರಾಗಿರುವ ಗಬ್ಬರ್ ಖ್ಯಾತಿಯ ಎಡಗೈ ಬ್ಯಾಟ್ಸ್ಮನ್, ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಲಯ ಕಂಡುಕೊಳ್ಳು ಪ್ರಯತ್ನಿಸಲಿದ್ದಾರೆ.
3. ವಿರಾಟ್ ಕೊಹ್ಲಿ
ವಿಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಮರಳಿ ಕಂಡುಕೊಂಡಿದ್ದಾರೆ. ಒಡಿಐ ವಿಶ್ವಕಪ್ನಲ್ಲಿ ಅವರ ಬ್ಯಾಟ್ನಿಂದ ಯಾವುದೇ ಶತಕಗಳು ಮೂಡಿಬರದಿದ್ದರೂ, ಸತತ 5 ಅರ್ಧಶತಕಗಳನ್ನು ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಕೆರಿಬಿಯನ್ ನಾಡಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಿರುವ ಕೊಹ್ಲಿ ತಮ್ಮ ನೆಚ್ಚಿನ 3ನೇ ಕ್ರಮಾಂಕದಲ್ಲೇ ಆಡಲಿದ್ದಾರೆ.
4. ಶ್ರೇಯಸ್ ಅಯ್ಯರ್/ ಕೆ.ಎಲ್ ರಾಹುಲ್
ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ಗಾಗಿ ಪ್ರಯೋಗ ಮುಂದುವರಿದಿದೆ. ಹೆಚ್ಚುವರಿ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಕನ್ನಡಿಗೆ ಕೆ.ಎಲ್ ರಾಹುಲ್ ಅಥವಾ ಮುಂಬೈನ ಸ್ಟೈಲಿಷ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಇಬ್ಬರಲ್ಲಿ ಯಾರು 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕು. ವಿಶ್ವಕಪ್ನಲ್ಲಿ ರಾಹುಲ್ ನಂ.4 ಸ್ಥಾನದಲ್ಲಿ ಗಮನಾರ್ಹ ಪ್ರದರ್ಶನವೇನೂ ನೀಡಿರಲಿಲ್ಲ. ಹೀಗಾಗಿ ಹೊಸ ಪ್ರಯೋಗವಾಗಿ ಶ್ರೇಯಸ್ಗೆ ಅವಕಾಶ ಸಿಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
5. ರಿಷಭ್ ಪಂತ್
ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ಏಕದಿನ ಕ್ರಿಕೆಟ್ನಲ್ಲೂ ತಂಡಕ್ಕೆ ಇದೇ ರೀತಿಯಲ್ಲಿ ನೆರವಾಗುವ ಕಡೆಗೆ ಎದುರು ನೋಡುತ್ತಿದ್ದಾರೆ. 42 ಎಸೆತಗಳಲ್ಲಿ ತಲಾ 4 ಫೋರ್ ಮತ್ತು ಸಿಕ್ಸರ್ಗಳನ್ನು ಸಿಡಿಸಿದ ಪಂತ್, ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಎಂ.ಎಸ್ ಧೋನಿ ಸ್ಥಾನವನ್ನು ಪಂತ್ ತುಂಬಬಲ್ಲರೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಷ್ಟೆ.
6. ಕೇದಾರ್ ಜಾಧವ್/ ಮನೀಶ್ ಪಾಂಡೆ
ಟಿ20 ಸರಣಿಯಲ್ಲಿ ಮೂರೂ ಪಂದ್ಯಗಳನ್ನು ಆಡುವ ಅವಕಾಶ ಪಡೆದ ಮನೀಶ್ ಪಾಂಡೆಗೆ ಏಕದಿನ ಸರಣಿಯಲ್ಲಿ ಸ್ಥಾನ ಸಿಗುವುದು ಕೊಂಚ ಅನುಮಾನವಾಗಿದೆ. ಏಕೆಂದರೆ ಪ್ರಮುಖ ಆಲ್ರೌಂಡರ್ ಕೇದಾರ್ ಜಾಧವ್ ಮರಳಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಬಲ್ಲ ಸಾಮರ್ಥ್ಯ ಅವರದ್ದು. ಹೀಗಾಗಿ 6ನೇ ಕ್ರಮಾಂಕಕ್ಕೆ ಮನೀಶ್ ಮತ್ತು ಕೇದಾರ್ ನಡುವೆ ಪೈಪೋಟಿಯಿದೆ.
7. ರವೀಂದ್ರ ಜಡೇಜಾ
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3ಡಿ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲದರಲ್ಲೂ ತಂಡದ ಯಶಸ್ಸಿಗೆ ಕೊಡುಗೆ ಸಲ್ಲಿಸಬಲ್ಲೆ ಎಂಬುದನ್ನು ಆಯ್ಕೆದಾರರ ತಲೆಗೆ ಹೊಕ್ಕುವಂತೆ ಮಾಡಿದ್ದರು. ಅವರ ಈ ಪ್ರದರ್ಶನ ಬಲದಿಂದ ಸದ್ಯಕ್ಕೆ ಅವರನ್ನು ಭಾರತ ತಂಡದಿಂದ ಅಲುಗಾಡಿಸಲು ಸಾಧ್ಯವಿಲ್ಲ. ಜಡೇಜಾ 7ನೇ ಕ್ರಮಾಂಕದ ಬ್ಯಾಟ್ಸ್ಮನ್ ಜೊತೆಗೆ ಎಡಗೈ ಸ್ಪಿನ್ ಬೌಲಿಂಗ್ನ ಸೇವೆ ಒದಗಿಸಲಿದ್ದಾರೆ.
8. ಯುಜ್ವೇಂದ್ರ ಚಹಲ್
ಟಿ20 ಸರಣಿಗೆ ಯುವ ಪ್ರತಿಭೆಗಳಿಗೆ ಮಣೆ ಹಾಕಿದ್ದ ಕಾರಣ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಏಕದಿನ ಸರಣಿಯಲ್ಲಿ ಚಹಲ್ ತಮ್ಮ ಮ್ಯಾಜಿಕ್ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಜಡೇಜಾ ಜೊತೆಗೂಡಿ ಚಹಲ್ ಟೀಮ್ ಇಂಡಿಯಾದ ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ.
9. ಭುವನೇಶ್ವರ್ ಕುಮಾರ್
ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಟಿ20 ಸರಣಿಯಲ್ಲಿ ಈಗಾಗಲೇ ಕೆರಿಬಿಯನ್ ಬ್ಯಾಟ್ಸ್ಮನ್ಗಳಿಗೆ ತೋರಿಸಿಕೊಟ್ಟಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್ ತರುವ ಮೂಲಕ ಹಾಗೂ ಡೆತ್ ಓವರ್ಗಳಲ್ಲಿ ತಮ್ಮ ಯಾರ್ಕರ್ ಮತ್ತು ನಕಲ್ ಬಾಲ್ಗಳ ಮೂಲಕ ವಿಕೆಟ್ ಪಡೆಯುವುದರ ಜೊತೆಗೆ ರನ್ ಗತಿಯನ್ನು ನಿಯಂತ್ರಿಸಬಲ್ಲರು.
10. ಮೊಹಮ್ಮದ್ ಶಮಿ
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ತಂಡದ ಪರ ವಿಕೆಟ್ ಪಡೆಯುವ ಜವಾಬ್ದಾರಿಯನ್ನು ಮೊಹಮ್ಮದ್ ಶಮಿ ನಿಭಾಯಿಸಲಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲೂ ಶಮಿ ತಮಗೆ ಸಿಕ್ಕ ಅವಕಾಶಗಳಲ್ಲಿ ಅಬ್ಬರಿಸಿದ್ದರು. ಅದರಲ್ಲೂ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.
11. ನವದೀಪ್ ಸೈನಿ
ಗಂಟೆಗೆ 150ರ ಆಜುಬಾಜಿನಲ್ಲಿ ಚೆಂಡನ್ನು ಎಸೆಯುವ ಸಾಮರ್ಥ್ಯ ಹೊಂದಿರುವ ಯುವ ವೇಗದ ಬೌಲರ್ ನವದೀಪ್ ಸೈನಿ, ಟಿ20 ಸರಣಿಯಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದು ಪದಾರ್ಪಣೆಯ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದರು. ಹೀಗಾಗಿ ಏಕದಿನ ಕ್ರಿಕೆಟ್ ಸರಣಿಯಲ್ಲೂ ಸೈನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಅವರ ಹೆಚ್ಚುವರಿ ವೇಗ ವಿಂಡೀಸ್ ಬ್ಯಾಟ್ಸ್ಮನ್ಗಳಿಗೆ ಸವಾಲಾಗಲಿದೆ.