
ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಹಣಾಹಣಿ ಯಾವುದು ಎಂಬ ಪ್ರಶ್ನೆ ಎದುರಾದಾಗ ಬಹುತೇಕ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಬರುವ ಏಕೈಕ ಉತ್ತರ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಣಸಾಟ ಎಂಬುದು. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಣಸಾಟ ಬದ್ಧ ವೈರಿಗಳ ಕಾಳಗ ಎಂದೇ ಹೆಸರನ್ನು ಮಾಡಿದ್ದು, ಈ ಹಿಂದೆ ಇತ್ತಂಡಗಳು ಪರಸ್ಪರ ಪ್ರವಾಸಗಳನ್ನು ಕೈಗೊಳ್ಳುವ ಮೂಲಕ ಸಾಮಾನ್ಯ ಸರಣಿಗಳಲ್ಲಿ ಸೆಣಸಾಡುತ್ತಿದ್ದವು. ಆದರೆ, ರಾಜಕೀಯ ಕಾರಣಗಳಿಂದಾಗಿ ಭಾರತ ಪಾಕಿಸ್ತಾನದ ವಿರುದ್ಧ ಸರಣಿಗಳನ್ನು ಆಡುವುದನ್ನು ನಿಷೇಧಿಸಿದೆ.
ಹೌದು, ಭಾರತ ಪಾಕಿಸ್ತಾನ ಪ್ರವಾಸವನ್ನು ಕೈಗೊಳ್ಳುವುದು ಹಾಗೂ ಪಾಕಿಸ್ತಾನವನ್ನು ಸ್ವದೇಶಕ್ಕೆ ಕರೆಸಿ ಸರಣಿ ಏರ್ಪಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇತರೆ ತಂಡಗಳ ನಡುವೆ ನಡೆಯುವ ರೀತಿಯ ಸರಣಿಗಳು ಆಯೋಜನೆಯಾಗುತ್ತಿಲ್ಲ. ಇನ್ನು ಇತ್ತಂಡಗಳ ನಡುವೆ ಸಾಮಾನ್ಯ ಸರಣಿಗಳನ್ನು ಏರ್ಪಡಿಸಬೇಕೆಂದು ಹಲವರು ಈಗಾಗಲೇ ಪ್ರಯತ್ನಿಸಿದ್ದು, ಫಲ ಸಿಗದೇ ಕೈಸುಟ್ಟಿಕೊಂಡಿದ್ದಾರೆ.
ಇದೀಗ ಈ ಕುರಿತಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಮಾಜಿ ಅಧ್ಯಕ್ಷ ಇಶಾನ್ ಮಾನಿ ಮಾತನಾಡಿದ್ದು ಭಾರತವೇ ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಲಿ ಎಂದಿದ್ದಾರೆ. ಹೌದು, "ಅವರು ಆಡಲು ಬಯಸಿದರೆ, ಅವರು ಪಾಕಿಸ್ತಾನಕ್ಕೆ ಬಂದು ಆಡಲಿ ಎಂದು ನಾನು ಯಾವಾಗಲೂ ಸ್ಪಷ್ಟಪಡಿಸುತ್ತೇನೆ. ನಾನು ಎಂದಿಗೂ ಈ ಸರಣಿ ಆಯೋಜನೆಯಾಗುವುದು ಬೇಡ ಎಂದು ಹೇಳಿಲ್ಲ, ಆದರೆ ನಾವು ನಮ್ಮದೇ ಆದ ಸಮಗ್ರತೆ, ನಮ್ಮ ಗೌರವವನ್ನು ಹೊಂದಿದ್ದೇವೆ ಹಾಗೂ ಅದನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ನಾವೇಕೆ ಭಾರತದ ಹಿಂದೆ ಓಡಬೇಕು? ನಾವು ಆ ಕೆಲಸಕ್ಕೆ ನಾವು ಕೈಹಾಕಬಾರು. ಅವರು ಯಾವಾಗ ಸಿದ್ಧರಾಗುತ್ತಾರೋ ಆಗ ಮಾತ್ರ ನಾವೂ ಸಿದ್ಧರಾಗಿರುತ್ತೇವೆ" ಎಂದು ಇಶಾನ್ ಮಾನಿ ತಿಳಿಸಿದ್ದಾರೆ.
ಸರಣಿ ಆಯೋಜಿಸಲು ಹೋಗಿ ಕೈಸುಟ್ಟಿಕೊಂಡಿದ್ದ ರಮೀಜ್ ರಾಜಾ:
ಇನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷ ರಮೀಜ್ ರಾಜಾ ಇತ್ತೀಚೆಗಷ್ಟೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸಾಮಾನ್ಯ ಸರಣಿ ಏರ್ಪಡಿಸಲು ಹೋಗಿ ಹಿನ್ನಡೆಯನ್ನು ಅನುಭವಿಸಿದ್ದರು. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ರಮೀಜ್ ರಾಜಾ ಶೀಘ್ರದಲ್ಲಿಯೇ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸಾಮಾನ್ಯ ಸರಣಿಗಳು ಏರ್ಪಡಲಿವೆ, ನಾವೇಕೆ ರಾಜಕೀಯ ಬದಿಗಿಟ್ಟು ಕ್ರಿಕೆಟ್ನ್ನು ಆನಂದಿಸಬಾರದು ಎಂದು ಹೇಳಿಕೆಯನ್ನು ನೀಡಿದ್ದರು. ಹಾಗೂ ಭಾರತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ತ್ರಿಕೋನ ಸರಣಿ ಏರ್ಪಡಿಸುವಲ್ಲಿ ಯಶಸ್ವಿಯಾಗುವುದಾಗಿಯೂ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಈ ಪ್ರಯತ್ನದಲ್ಲಿ ಎಡವಿದ ರಮೀಜ್ ರಾಜಾ ಐಸಿಸಿ ಬಳಿ ಈ ಪ್ರಸ್ತಾಪವನ್ನಿಟ್ಟು ಸಮ್ಮತಿ ಸಿಗದೇ ವಿಫಲರಾದರು. ಹಾಗೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸರಣಿಗಳನ್ನು ಆಯೋಜಿಸಲು ನಾವು ಸಿದ್ಧ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ನಿಕ್ ಹಾಕ್ಲೆ ಕೂಡ ಬೆಂಬಲವನ್ನು ವ್ಯಕ್ತಪಡಿಸಿದ್ದರು.