

ಚಂಡೀಗಢ, ಫೆಬ್ರವರಿ 19: ಭಾರತದ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಮುಂಬರಲಿರುವ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಬಾರದು ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತಿರೋಧವಾಗಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಕೂಡದು ಎಂದು ಭಜ್ಜಿ ತಿಳಿಸಿದ್ದಾರೆ.
'ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಆಡಬಾರದು. ಪಾಕ್ ವಿರುದ್ಧ ಆಡದ ಹೊರತೂ ಭಾರತ ವಿಶ್ವಕಪ್ ಗೆಲ್ಲಲು ಸಾಕಷ್ಟು ಶಕ್ತವಾಗಿದೆ' ಎಂದು ಹರ್ಭಜನ್ ಆಜ್ತಕ್ ಜೊತೆ ಮಾತನಾಡುತ್ತ ಹೇಳಿಕೊಂಡಿದ್ದಾರೆ. ದಾಳಿ ನಡೆದಿದ್ದು ತುಂಬಾ ಕೆಟ್ಟ ವಿಚಾರ ಎಂದು ಹರ್ಭಜನ್ ಅಭಿಪ್ರಾಯಿಸಿದ್ದಾರೆ.
Breaking News: Don’t play World Cup Match with Pakistan if situation doesn’t improve Says @harbhajan_singh @aajtak @IndiaToday #PulwamaAttack pic.twitter.com/v0rk76uhQv
— Vikrant Gupta (@vikrantgupta73) February 18, 2019
'ಈ ವಿಚಾರವಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಿಕೆಟ್ನ ವಿಚಾರಕ್ಕೆ ಬರುವುದಾದರೆ, ಪಾಕಿಸ್ಥಾನ ಇದೇ ಚಾಳಿ ತೋರುತ್ತಿದ್ದರೆ ಅವರಿಗೂ ನಮಗೂ ನಾಳೆ ಯಾವುದೇ ಸಂಬಂಧ ಇರಲಾರದು ಎಂದು ನಾನು ಭಾವಿಸಿದ್ದೇನೆ' ಎಂದು ದಾಳಿಯ ಬಗ್ಗೆ ಭಜ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ಉಗ್ರರು ಸಂಚು ಹೂಡಿ ನಡೆಸಿದ ಬಾಂಬ್ ದಾಳಿಯಲ್ಲಿ ಭಾರತದ ಸುಮಾರು 40ಕ್ಕೂ ಅಧಿಕ ಯೋಧರು ಮೃತರಾಗಿದ್ದರು. ಈ ಘಟನೆ ಇಡೀ ಭಾರತೀಯರನ್ನು ಘಾಸಿಗೊಳಿಸಿತ್ತು. ಪಾಕಿಸ್ತಾನ ನಡೆಸಿದೆ ಎನ್ನಲಾಗಿರುವ ಈ ದಾಳಿಗೆ ಕ್ರಿಕೆಟ್ ವಲಯದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ.