ಬೆಂಗಳೂರು, ನವೆಂಬರ್ 13 : ಮೈಕೊರೆಯುವ ಚಳಿ, ಸಂಜೆಯಾದರೆ ಜಿಟಿಜಿಟಿ ಮಳೆ, ದೀಪಾವಳಿ ಸಂದರ್ಭದಲ್ಲಿ ಸೂರ್ಯ ವೀಕೆಂಡ್ ರಜಾ ತೆಗೆದುಕೊಂಡು ಪಿಕ್ನಿಕ್ಕಿಗೆ ಹೋಗಿದ್ದಾನೆ... ಅಂಥದರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಛತ್ರಿ ಹಿಡಿದು ಕುಳಿತುಬಿಟ್ಟಿದೆ. ಯಾವಾಗ ಬೇಕಾದರೂ ಮಳೆ ಬರುವಂಥ ವಾತಾವರಣ. ಟಿಕೆಟ್ ಪಡೆದಿರುವ ಕ್ರಿಕೆಟ್ ಪ್ರೇಮಿಗಳು ಗಸಗಸನೆ ಕೈ ಉಜ್ಜಿಕೊಳ್ಳುತ್ತ ಐದು ದಿನಗಳ ಆಟದ ಮಜಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಮಳೆ ಬಿಡುತ್ತಾ?

ಆದರೆ, ಈಗಾಗಲೆ ಒದ್ದೆಯಾಗಿರುವ ಪಿಚ್ ಭಾಗವನ್ನು ಡ್ರೈ ಮಾಡುವುದು ಹೇಗೆ? ಅದಕ್ಕೂ ವಿನೂತನ ಮಾರ್ಗ ಕಂಡುಹಿಡಿದಿದೆ ಕೆಎಸ್ಸಿಎ. ಅದೇನೆಂದರೆ, ಚಳಿಗಾಲದಲ್ಲಿ ಕಾಯಿಸಿಕೊಳ್ಳುವ ಹಾಗೆ, ಕಟ್ಟಿಗೆ ಒಟ್ಟಿ ಬೆಂಕಿ ಹಚ್ಚಿ ಪಿಚ್ಚನ್ನು ಡ್ರೈ ಮಾಡಲಾಗುತ್ತಿದೆ. ಈ ಬಗೆಯ ತಂತ್ರ ಎಲ್ಲಾದರೂ ನೋಡಿದ್ದಿರಾ? ಇದನ್ನು ನೋಡಿ ಎರಡೂ ದೇಶಗಳು ಆಟಗಾರರು ಕೂಡ ಅಚ್ಚರಿಗೊಂಡಿದ್ದಾರೆ.

ಹೆಚ್ಚೂಕಡಿಮೆ ಪ್ರತಿದಿನ ಮಧ್ಯಾಹ್ನದಿಂದಲೇ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಸಿಎ ಕಾರ್ಯದರ್ಶಿಯಾಗಿರುವ, ಮಾಜಿ ಟೆಸ್ಟ್ ಆಟಗಾರ ಬ್ರಿಜೇಶ್ ಪಟೇಲ್ ಅವರು ಪೆಂಡಾಲ್ ಹಾಕುವ ನೂತನ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ.
ಮೋಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಮೂರೇ ದಿನದಲ್ಲಿ ಮುಗಿದು, ಭಾರತದ ವಿರುದ್ಧ ದಕ್ಷಿಣ ಆಫ್ರಿಯಾ 108 ರನ್ ಸೋಲು ಅನುಭವಿಸಿತ್ತು. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ, ದಕ್ಷಿಣ ಆಫ್ರಿಕಾದ ಕ್ಯಾಪ್ಟನ್ ಎಬಿ ಡಿವಿಲಿಯರ್ಸ್, ಮೊದಲ ಟೆಸ್ಟ್ ಸೋಲಿನ ಸೇಡು ತೀರಿಸಿಕೊಳ್ಳಲು ತಹತಹಿಸುತ್ತಿದ್ದಾರೆ. [ಮೊಹಾಲಿಯಲ್ಲಿ ಆಫ್ರಿಕಾ ಮುಳುಗಿಸಿದ ಮೂವರು ರವಿಗಳು!]