ಬಹು ನಿರೀಕ್ಷಿತ ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಶುಭಮನ್ ಗಿಲ್ಗೆ ಈ ತಂಡದಲ್ಲಿ ಸ್ಥಾನ ಲಭಿಸುತ್ತದಾ ಎಂಬ ಪ್ರಶ್ನೆಗಳಿಗೆ ಮಂಗಳವಾರ ಮಧ್ಯಾಹ್ನ ಉತ್ತರ ಲಭಿಸಿದೆ. ಅಲ್ಲದೆ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಮ್ಯಾನೇಜ್ಮೆಂಟ್ ತನ್ನ ಚಿತ್ತವನ್ನು ಸ್ಪಷ್ಟ ಪಡಿಸಿದೆ. ಏಷ್ಯಾ ಕಪ್ ಟಿ20 ತಂಡದಲ್ಲಿ ಟೀಮ್ ಇಂಡಿಯಾವನ್ನು ಪ್ರಕಟಿಸಿದಾಗ ಸೂರ್ಯಕುಮಾರ್ ಯಾದವ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಉಪನಾಯಕರಾಗಿ ಶುಭಮನ್ ಗಿಲ್ ಅವರು ಆಯ್ಕೆ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶುಭಮನ್ ಗಿಲ್ ಅವರಿಗೆ ಏಷ್ಯಾ ಕಪ್ ಟಿ20 ತಂಡದಲ್ಲಿ ಸ್ಥಾನ ಸಿಗುತ್ತದಾ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಆಯ್ಕೆ ಸಮಿತಿ ಟೀಮ್ ಇಂಡಿಯಾದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ದೊಡ್ಡ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಟೀಮ್ ಇಂಡಿಯಾದ ಮೂರು ಫಾರ್ಮೆಟ್ ಕ್ಯಾಪ್ಟನ್ ಎಂದೇ ಬಿಂಬಿತವಾಗುತ್ತಿರುವ ಶುಭಮನ್ ಗಿಲ್ ಅವರಿಗೆ ಏಷ್ಯಾ ಕಪ್ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಇವರಿಗೆ ಉಪನಾಯಕ ಪಟ್ಟವನ್ನು ಕಟ್ಟಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡರು. ಈ ವೇಳೆ ಅಮೋಘ ಪ್ರದರ್ಶನ ನೀಡಿ ದಾಖಲೆಯ ಮೇಲೆ ದಾಖಲೆ ಬರೆದರು. ಇವರು ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಮುಂದಾಳತ್ವದಲ್ಲಿ ಯಂಗ್ ಟೀಮ್ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿತ್ತು. ಹೀಗಾಗಿ ಇವರಿಗೆ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಲಭಿಸುವುದು ಕನ್ಫರ್ಮ್ ಎಂದೇ ನಂಬಲಾಗಿತ್ತು. ಅದರಂತೆ ಇವರಿಗೆ ಈಗ ದೊಡ್ಡ ಜವಾಬ್ದಾರಿ ನೀಡಲಾಗಿದೆ.
ಶುಭಮನ್ ಗಿಲ್ ಟಿ20 ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಂತೆ ಇವರು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇವರು ಆರಂಭಿಕರಾಗಿ ಕಾಣಿಸಿಕೊಂಡರೆ, ತಮ್ಮ ಆಪ್ತ ಸ್ನೇಹಿತ ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಬಹುದು. ಇಲ್ಲದೇ ಇದಲ್ಲಿ ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು. ಈ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವತ್ತ ಗಿಲ್ ಚಿತ್ತ ನೆಟ್ಟಿದ್ದಾರೆ.
ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆ ಆಗುತ್ತಲೇ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ಪಡೆದುಕೊಂಡರು. ಇನ್ನು ಈಗ ಟಿ20 ಕ್ರಿಕೆಟ್ನಲ್ಲೂ ಈ ಮೊದಲು ವಿರಾಟ್ ಬ್ಯಾಟ್ ಮಾಡುತ್ತಿದ್ದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವತ್ತ ಚಿತ್ತ ನೆಟ್ಟಿದ್ದಾರೆ. ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದೇ ಆದಲ್ಲಿ ತಂಡ ಸಮತೋಲನದಿಂದ ಕೂಡಿರಲಿದೆ.
ಒಂದು ವೇಳೆ ಶುಭಮನ್ ಗಿಲ್ ಆರಂಭಿಕರಾಗಿ ಕಾಣಿಸಿಕೊಂಡಲ್ಲಿ ಕಳೆದ ಒಂದು ವರ್ಷದಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದ ಸಂಜು ಸ್ಯಾಮ್ಸನ್ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಅಲ್ಲದೆ ಇವರಿಗೆ ತಂಡದಲ್ಲಿ ಸ್ಥಾನ ಸಿಗುವುದೇ ಡೌಟ್ ಎಂದು ಹೇಳಲಾಗುತ್ತಿದೆ. ಇವರ ಬದಲಿಗೆ ಜಿತೇಶ್ ಶರ್ಮಾ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಬಹುದಾಗಿದೆ. ಅಲ್ಲದೆ ಇವರು ಫಿನಿಷರ್ ಪಾತ್ರಕ್ಕೆ ಹೇಳಿ ಮಾಡಿಸಿದ ಆಟಗಾರ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಸಂಜುಗೆ ಚಾನ್ಸ್ ಸಿಗುವುದು ಕಷ್ಟ.