ಬಹುನಿರೀಕ್ಷಿತ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ನಾಯಕ ರೋಹಿತ್ ಶರ್ಮಾ ಅವರು ಸೋಮವಾರ, ಆಗಸ್ಟ್ 21ರಂದು 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದರು.
ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದರೆ, ಹಾರ್ದಿಕ್ ಪಾಂಡ್ಯಗೆ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಮೊದಲ ಆಯ್ಕೆಯ ವಿಕೆಟ್ಕೀಪರ್ ಆಗಿ ಕೆಎಲ್ ರಾಹುಲ್ ಇದ್ದರೆ, ಎರಡನೇ ಆಯ್ಕೆಯ ವಿಕೆಟ್ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ.
2023ರ ಏಷ್ಯಾ ಕಪ್ ಪಂದ್ಯಾವಳಿಯ 16ನೇ ಆವೃತ್ತಿಯು ಇದೇ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ ತಂಡಗಳು ಭಾಗವಹಿಸಲಿವೆ.

ಈ ಬಾರಿಯ ಪಂದ್ಯಾವಳಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಗಸ್ಟ್ 30ರಂದು ಪಾಕಿಸ್ತಾನ ಮತ್ತು ನೇಪಾಳ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನಕ್ಕೆ ತನ್ನ ತಂಡವನ್ನು ಕಳುಹಿಸಲು ನಿರಾಕರಿಸಿದ ನಂತರ, ಆರು ತಂಡಗಳ ಏಷ್ಯಾ ಕಪ್ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ.
ಇನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ ಅಭಿಯಾನದ ಮೊದಲ ಪಂದ್ಯದಲ್ಲಿ ಸೆಪ್ಟೆಂಬರ್ 2ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಗಾಯದ ಕಾರಣದಿಂದ ಬಹುದಿನಗಳ ಕಾಲ ಭಾರತ ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ತಂಡಕ್ಕೆ ಮರಳಿದ್ದಾರೆ. ಇನ್ನು ಹೊಸಮುಖವಾಗಿ ಯುವ ಬ್ಯಾಟರ್ ತಿಲಕ್ ವರ್ಮಾ ಏಷ್ಯಾ ಕಪ್ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
1) ರೋಹಿತ್ ಶರ್ಮಾ - ಮುಂಬೈ (ಮಹಾರಾಷ್ಟ್ರ)
2) ಹಾರ್ದಿಕ್ ಪಾಂಡ್ಯ - ಬರೋಡಾ (ಗುಜರಾತ್)
3) ಶುಭ್ಮನ್ ಗಿಲ್ - ಪಂಜಾಬ್
4) ವಿರಾಟ್ ಕೊಹ್ಲಿ - ದೆಹಲಿ
5) ಶ್ರೇಯಸ್ ಅಯ್ಯರ್- ಮುಂಬೈ (ಮಹಾರಾಷ್ಟ್ರ)
6) ಸೂರ್ಯಕುಮಾರ್ ಯಾದವ್ - ಮುಂಬೈ (ಮಹಾರಾಷ್ಟ್ರ)
7) ಕೆಎಲ್ ರಾಹುಲ್ (ವಿಕೆಟ್ ಕೀಪರ್) - ಮಂಗಳೂರು (ಕರ್ನಾಟಕ)
8) ಇಶಾನ್ ಕಿಶನ್ (ವಿಕೆಟ್ ಕೀಪರ್) - ಜಾರ್ಖಂಡ್
9) ರವೀಂದ್ರ ಜಡೇಜಾ - ರಾಜಕೋಟ್ (ಗುಜರಾತ್)
10) ಶಾರ್ದೂಲ್ ಠಾಕೂರ್ - ಮುಂಬೈ (ಮಹಾರಾಷ್ಟ್ರ)
11) ಅಕ್ಷರ್ ಪಟೇಲ್ - ರಾಜಕೋಟ್ (ಗುಜರಾತ್)
12) ಕುಲದೀಪ್ ಯಾದವ್ - ಉತ್ತರಪ್ರದೇಶ
13) ಜಸ್ಪ್ರೀತ್ ಬುಮ್ರಾ - ಅಹಮದಾಬಾದ್ (ಗುಜರಾತ್)
14) ಮೊಹಮ್ಮದ್ ಶಮಿ - ಉತ್ತರಪ್ರದೇಶ
15) ಮೊಹಮ್ಮದ್ ಸಿರಾಜ್ - ಹೈದರಾಬಾದ್ - (ತೆಲಂಗಾಣ)
16) ಪ್ರಸಿದ್ಧ್ ಕೃಷ್ಣ - ಬೆಂಗಳೂರು (ಕರ್ನಾಟಕ)
17) ಸಂಜು ಸ್ಯಾಮ್ಸನ್ (ಮೀಸಲು ಆಟಗಾರ) - ಕೇರಳ