ಜಡೇಜಾ ಬದಲಿಗೆ ಚಾಹಲ್-ವಿವಾದ, ಕನ್ಕಶನ್ ಸಬ್ ನಿಯಮವೇನು?!

ಕ್ಯಾನ್ಬೆರಾ: ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ20ಐ ಪಂದ್ಯ ವಿವಾದಕ್ಕೀಡಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಬದಲಿಗೆ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಹೊಸ ಬದಲಿ ಆಟಗಾರನ ನಿಯಮದ ಪ್ರಕಾರ ಬದಲಿಸಿದ್ದು ಚರ್ಚೆಗೆ ಕಾರಣವಾಗಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮದ ಪ್ರಕಾರ ಆಟಗಾರರನ್ನು ಬದಲಿಸಿದ ಎರಡನೇ ಉದಾಹರಣೆಗೆ ಶುಕ್ರವಾರದ ಪಂದ್ಯ ಸಾಕ್ಷಿಯಾಯ್ತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತದಿಂದ ಇನ್ನಿಂಗ್ಸ್ನ ಕಡೇ ಕ್ಷಣದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ನಿರ್ಗಮಿಸಿದರು. 23 ಎಸೆತಗಳಿಗೆ 44 ರನ್ ಬಾರಿಸಿದ್ದ ಜಡೇಜಾ ಕೊನೇ ಕ್ಷಣದಲ್ಲಿ ಚೆಂಡು ತಲೆಗೆ ಬಡಿದಿದ್ದರಿಂದ ಗಾಯಗೊಂಡರು.
ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಭಾರತ ತಂಡದಲ್ಲಿ ಯುಜುವೇಂದ್ರ ಚಾಹಲ್ ಅವರನ್ನು ಜಡೇಜಾ ಬದಲಿಗೆ ಮೈದಾನಕ್ಕಿಳಿಸಲಾಯ್ತು. ವಿವಾದ ಶುರುವಾಗಿದ್ದು ಇಲ್ಲೇನೆ.

ಆಸ್ಟ್ರೇಲಿಯಾ ಕೋಚ್ ಚರ್ಚೆ
ರವೀಂದ್ರ ಜಡೇಜಾ ಬದಲಿಗೆ ಯುಜುವೇಂದ್ರ ಚಾಹಲ್ ಮೈದಾನಕ್ಕಿಳಿದಾಗ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಮ್ಯಾಚ್ ರೆಫರೀ ಡೇವಿಡ್ ಬೂನ್ ಜೊತೆ ಚರ್ಚೆ ನಡೆಸಿದರು. ಲ್ಯಾಂಗರ್ ಜೊತೆ ಆಸೀಸ್ ನಾಯಕ ಆ್ಯರನ್ ಫಿಂಚ್ ಕೂಡ ಜೊತೆಗಿದ್ದರು. ಚಾಹಲ್ಗೆ ಬೌಲಿಂಗ್ಗೆ ಅವಕಾಶ ಕೊಡಬಾರದು ಎನ್ನುವ ವಾದ ಲ್ಯಾಂಗರ್ ಮತ್ತು ಫಿಂಚ್ ಅವರದ್ದಾಗಿತ್ತು. ಆದರೆ ರೆಫರೀ ಬೂನ್ ಅದಕ್ಕೆ ಒಪ್ಪಲಿಲ್ಲ.

ಚಾಹಲ್ ಮಾರಕ ಬೌಲಿಂಗ್
ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ಗಳನ್ನು ಉರುಳಿಸಿದರು. ನಾಯಕ ಆ್ಯರನ್ ಫಿಂಚ್ (35 ರನ್), ಸ್ಟೀವ್ ಸ್ಮಿತ್ (12) ಮತ್ತು ಮ್ಯಾಥ್ಯೂ ವೇಡ್ (7) ವಿಕೆಟ್ಗಳು ಲಭಿಸಿದವು. ಚಾಹಲ್ 4 ಓವರ್ಗೆ 25 ರನ್ ನೀಡಿ 3 ವಿಕೆಟ್ ಮುರಿದು ಗಮನ ಸೆಳೆದಿದ್ದರು. ಪಂದ್ಯ ಕೂಡ 11 ರನ್ನಿಂದ ಭಾರತ ಗೆದ್ದಿತು.

ಏನಿದು ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮ?
2019ರಲ್ಲಿ ಲಾರ್ಡ್ಸ್ನಲ್ಲಿ ನಡೆದಿದ್ದ ಆ್ಯಷನ್ ಟೆಸ್ಟ್ನಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆತಕ್ಕೆ ಸ್ಟೀವ್ ಸ್ಮಿತ್ ಗಾಯಗೊಂಡಾಗ ಸ್ಮಿತ್ ಬದಲಿಗೆ ಮಾರ್ನಸ್ ಲ್ಯಾಬುಶೇನ್ ಅವರನ್ನು ಮೈದಾನಕ್ಕಿಳಿಸಲಾಗಿತ್ತು. ಇದು ಕನ್ಕಶನ್ ಸಬ್ಸ್ಟಿಟ್ಯೂಟ್ನ ಮೊದಲ ಉದಾಹರಣೆ. ಆಟಗಾರನಿಗೆ ತಲೆಗೆ ಹೊಡೆತ ಬಿದ್ದಾಗ, ಗಾಯವಾದಾಗ ಬೇರೆ ಆಟಗಾರರನ್ನು ಮೈದಾನಕ್ಕಿಳಿಸುವ ನಿಯಮವಿದು. ಈ ನಿಯಮವನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ತಮ್ಮ ದೇಸಿ ಕ್ರಿಕೆಟ್ ವೇಳೆ ಬಳಸಿಕೊಂಡಿದ್ದವು. ಈಗ ಐಸಿಸಿ ಕೂಡ ಈ ನಿಯಮವನ್ನು ಎಲ್ಲಾ ಕ್ರಿಕೆಟ್ ಮಾದರಿಗೆ ತಂದಿದೆ.

ನೂತನ ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮವೇನು?
ಐಸಿಸಿ ಹೊಸ ಕನ್ಕಶನ್ (ಸಂಘರ್ಷಣೆ) ಸಬ್ಸಿಸ್ಟಿಟ್ಯೂಟ್ ನಿಯಮದ ಪ್ರಕಾರ ಬ್ಯಾಟ್ಸ್ಮನ್ ಗಾಯಗೊಂಡಾಗ ಆತನಿಗೆ ಬದಲಿ ಆಟಗಾರನನ್ನು ಬ್ಯಾಟಿಂಗ್ ತಂಡ ಮೈದಾನಕ್ಕಿಳಿಸಬಹುದು. ಅದರೆ ಬರುವ ಬದಲಿ ಆಟಗಾರನನ್ನು ಬೌಲಿಂಗ್ ಮಾಡದಂತೆ ತಡೆಯುವ ಶಕ್ತಿ ಮ್ಯಾಚ್ ರೆಫರೀಗೆ ಇರುತ್ತದೆ. ಉದಾಹರಣೆ: ಅಪ್ಪಟ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಒಂದು ವೇಳೆ ಗಾಯಗೊಂಡರೆ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ ಅವರನ್ನು ಮೈದಾನಕ್ಕಿಳಿಸಬಹುದು. ಆದರೆ ಮ್ಯಾಚ್ ರೆಫರೀಗೆ ಮಾರ್ಷ್ ಅವರನ್ನು ಬೌಲಿಂಗ್ ಮಾಡದಂತೆ ತಡೆಯುವ ಶಕ್ತಿಯಿರುತ್ತದೆ.ಹಾಗಂತ ಆಸ್ಟ್ರೇಲಿಯಾ-ಭಾರತ ಪಂದ್ಯದಲ್ಲಿ ಚಾಹಲ್ ಅವರನ್ನು ಬೌಲಿಂಗ್ ಮಾಡದಂತೆ ರೆಫರೀ ಬೂನ್ ತಡೆಯಲಿಲ್ಲ. ಯಾಕೆಂದರೆ ಜಡೇಜಾ ಕೂಡ ಸ್ಪಿನ್ ಬೌಲರ್!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications