ರೋಹಿತ್ ಶರ್ಮಾ ಬಳಿಯಿರುವ ಆ ವಿಶೇಷ ಸಾಮರ್ಥ್ಯಕ್ಕೆ ದಂಗಾದ ದಿನೇಶ್ ಕಾರ್ತಿಕ್

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ಮುಕ್ತಾಯವಾಗಿದ್ದು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಮಳೆಯಿಂದಾಗಿ ತಲಾ 8 ಓವರ್ಗಳ ಆಟಕ್ಕೆ ಪಂದ್ಯ ಸೀಮಿತವಾಗಿದ್ದರೂ ಅಭಿಮಾನಿಗಳು ಈ ಪಂದ್ಯದಲ್ಲಿ ಭರಪೂರ ಮನರಂಜನೆಯನ್ನು ಪಡೆದುಕೊಳ್ಳುವಲ್ಲಿ ಸಫಲವಾದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವೊಭಾಗದಲ್ಲಿಯೂ ಅಭಿಮಾನಿಗಳಿಗೆ ಸಾಕಷ್ಟು ಅತ್ಯುತ್ತಮ ಕ್ಷಣಗಳು ದೊರೆತಿರುವುದರಲ್ಲಿ ಅನುಮಾನವಿಲ್ಲ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ನಾಯಕ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 8 ಓವರ್ಗಳಲ್ಲಿ 91 ರನ್ಗಳನ್ನು ಗಳಿಸುವ ಸವಾಲು ಪಡೆದ ಭಾರತ ತಂಡದ ಪರವಾಗಿ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದು ಅಂತಿಮ ಹಂತದರೆಗೂ ಸ್ಪೋಟಕ ಪ್ರದರ್ಶನ ನಿಡುವ ಮೂಲಕ ಗೆಲುವಿಗೆ ಕಾರಣವಾದರು. ಇನ್ನು ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಮಾತನಾಡಿದ್ದು ರೋಹಿತ್ ಶರ್ಮಾ ಬಳಿಯಿರುವ ವಿಶೇಷ ಸಾಮರ್ಥ್ಯವೊಂದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ರೋಹಿತ್ ಬಳಿಯಿರುವ ಈ ಸಾಮರ್ಥ್ಯ ಉಳಿದ ಯಾವ ಆಟಗಾರನಲ್ಲಿಯೂ ಇಲ್ಲ ಎಂದಿದ್ದಾರೆ ದಿನೇಶ್ ಕಾರ್ತಿಕ್.

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್
ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯ ಈ ಸರಣಿಯಲ್ಲಿ ಭಾರತದ ಪಾಲಿಗೆ ಅತ್ಯಂತ ಮಹತ್ವದ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಕಾರಣ ಈ ಪಂದ್ಯವನ್ನು ಗೆದ್ದರಷ್ಟೇ ಸರಣಿಯಲ್ಲಿ ಜೀವಂತವಾಗುಳಿಯಲು ಸಾಧ್ಯವಿತ್ತು. ಇಂಥಾ ನಿರ್ಣಾಯಕ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 20 ಎಸೆತಗಳನ್ನು ಎದುರಿಸಿ ಭರ್ಜರಿ 46 ರನ್ಗಳನ್ನು ಗಳಿಸಿದರು. ಇದರಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಒಳಗೊಂಡಿತ್ತು. ಇನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅಂತಿಮ ಓವರ್ನಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ರನ್ ಬಾರಿಸಿ ಮಿಂಚಿದರು. ಈ ಮೂಲಕ ಭಾರತ ಈ ಸರಣಿಯನ್ನು ಸಮಬಲಗೊಳಿಸಲು ಸಾಧ್ಯವಾಯಿತು.

ರೋಹಿತ್ ಬಗ್ಗೆ ಮನಸಾರೆ ಹೊಗಳಿದ ಡಿಕೆ
ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್ ನಾಯಕ ರೋಹಿತ್ ಶರ್ಮಾ ನೀಡಿದ ಪ್ರದರ್ಶನದ ಬಗ್ಗೆ ಮನಸಾರೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. "ರೋಹಿತ್ ಶರ್ಮಾ ಅದ್ಭುತವಾದ ಆಟವನ್ನಾಡಿದ್ದಾರೆ. ನಾನು ಎರಡು ಎಸೆತಗಳನ್ನು ಮಾತ್ರವೇ ಎದುರಿಸಿದ್ದು ನನ್ನ ಅತ್ಯುತ್ತಮ ಪ್ರಯತ್ನವನ್ನು ನಡೆಸಿದೆ. ಆದರೆ ಹೊಸ ಚೆಂಡಿನಲ್ಲಿ ವಿಶ್ವದರ್ಜೆಯ ವೇಗಿಗಳ ವಿರುದ್ಧ ಅಂಥಾ ಹೊಡೆತಗಳನ್ನು ಬಾರಿಸುವುದು ನಿಜಕ್ಕೂ ಸುಲಭವಲ್ಲ. ಆ ಕಾರಣಕ್ಕಾಗಿಯೇ ರೋಹಿತ್ ಶರ್ಮಾ ಭಾರತ ಕ್ರಿಕೆಟ್ನಲ್ಲಿ ಮಾತ್ರವಲ್ಲ, ವಿಶ್ವ ಕ್ರಿಕೆಟ್ನಲ್ಲಿ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

"ಆ ವಿಶೇಷ ಸಾಮರ್ಥ್ಯ ಬೇರೆ ಯಾರಲ್ಲೂ ಇಲ್ಲ"
ಮುಂದುವರಿದು ಮಾತನಾಡಿದ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಲ್ಲಿರುವ ವಿಶೇಷ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ್ದಾರೆ. "ವೇಗದ ಬೌಲಿಂಗ್ ವಿರುದ್ಧ ಇಷ್ಟು ಅದ್ಭುತವಾಗಿ ಆಡುವ ಸಾಮರ್ಥ್ಯ ರೋಹಿತ್ ಶರ್ಮಾ ಅವರಲ್ಲಿ ಬಿಟ್ಟು ಮತ್ಯಾರಲ್ಲೂ ಇಲ್ಲ. ಆದ ಕಾರಣಕ್ಕೇ ರೋಹಿತ್ ಶರ್ಮಾ ಒಬ್ಬ ವಿಶೇಷ ಆಟಗಾರ" ಎಂದು ಎರಡನೇ ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾನುವಾರ ನಡೆಯಲಿದೆ ನಿರ್ಣಾಯಕ ಪಂದ್ಯ
ಇನ್ನು ಈ ಸರಣಿಯ ನಿರ್ಣಾಯಕ ಹಾಗೂ ಅಂತಿಮ ಪಂದ್ಯ ಭಾನುವಾರ ನಡೆಯಲಿದ್ದು ಹೈದರಾಬಾದ್ನಲ್ಲಿ ಈ ಮಹತ್ವದ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಸೋಲು ಹಾಗೂ ಗೆಲುವಿನ ರುಚಿ ಕಂಡಿದ್ದು ಸರಣಿ ಸಮಬಲದಲ್ಲಿದೆ. ಹೀಗಾಗಿ ಅಂತಿಮ ಪಂದ್ಯವನ್ನು ಗೆದ್ದ ತಂಡ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಹೀಗಾಗಿ ಜಿದ್ದಾಜಿದ್ದಿನ ಕದನ ನಡೆಯುವ ನಿರೀಕ್ಷೆಯಿದೆ. ಟೀಮ್ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಜಸ್ಪ್ರೀತ್ ಬೂಮ್ರಾ ಮರಳಿದ್ದು ತಮಡದ ಬಲ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications