
ಕ್ಯಾನ್ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಏಕದಿನ ಸರಣಿಯನ್ನು ಸೋತಿತ್ತು. ಆದರೆ ಟಿ20ಐ ಸರಣಿಯ ಆರಂಭಿಕ ಪಂದ್ಯದಲ್ಲೇ 11 ರನ್ ರೋಚಕ ಗೆಲುವು ಕಂಡಿರುವ ವಿರಾಟ್ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.
ಮೊದಲ ಟಿ20ಐ ಪಂದ್ಯ ನಡೆದಿದ್ದ ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ಒಂದು ವಿವಾದವೂ ಗಮನ ಸೆಳೆದಿತ್ತು. ಗಾಯಗೊಂಡ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಬದಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮದ ಪ್ರಕಾರ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಮೈದಾನಕ್ಕಿಳಿಸಿದ್ದು ಚರ್ಚೆಗೆ ಕಾರಣವಾಗಿತ್ತು.
ಭಾರತದ ಇನ್ನಿಂಗ್ಸ್ನ ಕೊನೇ ಕ್ಷಣದಲ್ಲಿ ತಲೆಗೆ ಚೆಂಡು ಬಡಿದಿದ್ದರಿಂದ ಆಸ್ಟ್ರೇಲಿಯಾ ಇನ್ನಿಂಗ್ಸ್ನಲ್ಲಿ ಚಾಹಲ್ ಅವರನ್ನು ಬದಲಿ ಆಟಗಾರರನ್ನಾಗಿ ಇಳಿಸಲಾಯ್ತು. ಆದರೆ ಚಾಹಲ್ಗೆ ಬೌಲಿಂಗ್ಗೆ ಅವಕಾಶ ಕೊಡಬಾರದು ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಮ್ಯಾಚ್ ರೆಫರೀ ಡೇವಿಡ್ ಬೂನ್ ಜೊತೆ ಚರ್ಚೆ ನಡೆಸಿದ್ದು ಕಂಡು ಬಂತು.
ಐಸಿಸಿಯ ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮದ ಪ್ರಕಾರ ಗಾಯಗೊಂಡ ಆಟಗಾರನ ಬದಲಿಗೆ ಅಂಥದ್ದೇ ಮತ್ತೊಬ್ಬ ಆಟಗಾರನನ್ನು ಮೈದಾನಕ್ಕಿಳಿಸಬಹುದಾಗಿದೆ. ಆದರೆ ಬದಲಿ ಆಟಗಾರನನ್ನು ನಿರ್ಬಂಧಿಸುವ ಹಕ್ಕು ಮ್ಯಾಚ್ ರೆಫರೀಗಿರುತ್ತದೆ. ಹೀಗಾಗಿ ಲ್ಯಾಂಗರ್ ಬೂನ್ ಅವರಲ್ಲಿ ಚಾಹಲ್ ನಿರ್ಬಂಧಿಸುವಂತೆ ಕೇಳಿಕೊಂಡರು.
ಲ್ಯಾಂಗರ್ ವಾದಕ್ಕೆ ಡೇವಿಡ್ ಬೂನ್ ಒಪ್ಪಲಿಲ್ಲ. ಚಾಹಲ್ಗೆ ಬೌಲಿಂಗ್ಗೆ ಅನುಮತಿ ನೀಡಲಾಯ್ತು. ಈ ವೇಳೆ ಲ್ಯಾಂಗರ್ ಅವರು ಬೂನ್ ಜೊತೆ ಚರ್ಚೆ ನಡೆಸಿ ಅಸಮಾಧಾನ ತೋರಿಕೊಂಡಿದ್ದು ಪಂದ್ಯದ ವೇಳೆ ಸೆರೆಯಾಗಿತ್ತು. ಜಡೇಜಾಗೆ ಬದಲಾಗಿ ಮೈದಾನಕ್ಕಿಳಿದಿದ್ದ ಚಾಹಲ್ 4 ಓವರ್ ಎಸೆದು 25 ರನ್ಗೆ ಪ್ರಮುಖ 3 ವಿಕೆಟ್ಗಳನ್ನು ಮುರಿದು ಭಾರತದ ಗೆಲುವಿಗೆ ಕಾರಣವಾಗಿದ್ದರು.