
ಮೆಲ್ಬರ್ನ್, ಜನವರಿ 17: ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಗೆದ್ದು ಬೀಗಿದ್ದರೆ, ಅಡಿಲೇಡ್ ಸ್ಟೇಡಿಂಯಂನಲ್ಲಿ ಪ್ರವಾಸಿ ಭಾರತ ಗೆಲುವಿನ ಸಂಭ್ರಮಾಚರಿಸಿತ್ತು. ಹೀಗಾಗಿ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಶುಕ್ರವಾರ (ಜನವರಿ 18) ನಡೆಯುವ ಭಾರತ-ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯ ಕುತೂಹಲ ಮೂಡಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ, ಉಪನಾಯಕ ರೋಹಿತ್ ಶರ್ಮಾ ಅವರ ಶತಕದ ಹೊರತಾಗಿಯೂ 34 ರನ್ ಸೋಲನುಭವಿಸಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ 6 ವಿಕೆಟ್ ಜಯದ ಮೂಲಕ ಭಾರತ ತಂಡ ಆಸೀಸ್ ಎದುರಿನ ಮೊದಲ ಸೋಲಿನ ಮುಯ್ಯಿ ತೀರಿಸಿಕೊಂಡಿತ್ತು. ಏಕದಿನ ಸರಣಿ ಈಗ 1-1ರಿಂದ ಸಮಬಲಗೊಂಡಿರುವುದರಿಂದ ಮೆಲ್ಬರ್ನ್ ಪಂದ್ಯ ನಿರ್ಣಾಯಕವೆನಿಸಲಿದೆ.
ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಆಟಗಾರರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಆಡಿದ್ದ ಖಲೀಲ್ ಅಹ್ಮದ್ ಮತ್ತು ದ್ವಿತೀಯ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಮೊಹಮ್ಮದ್ ಸಿರಾಜ್ ಬದಲಿಗೆ ತಂಡದಲ್ಲಿ ಯುಜುವೇಂದ್ರ ಚಾಹಲ್ ಅಥವಾ ವಿಜಯ್ ಶಂಕರ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಖಲೀಲ್ ಮತ್ತು ಸಿರಾಜ್ ಇಬ್ಬರೂ ಯುವ ಆಟಗಾರರು. ಇಬ್ಬರೂ ಇನ್ನಷ್ಟೇ ಚೇತರಿಕೆ ಕಾಣಬೇಕಿದೆ. ಹಾಗಾಗಿ ಆರಂಭಿಕ ಎರಡು ಪಂದ್ಯಗಳಲ್ಲಿ ಇಬ್ಬರಿಂದಲೂ ಗಮನಾರ್ಹ ಬೌಲಿಂಗ್ ದಾಳಿ ಕಂಡು ಬಂದಿರಲಿಲ್ಲ. ಈ ಕಾರಣ ಅಂತಿಮ ಪಂದ್ಯದಲ್ಲಿ ಒಂದೋ ಚಾಹಲ್ ಅಥವಾ ಶಂಕರ್ ತಂಡ ಸೇರಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ.
ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆ), ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್/ವಿಜಯ್ ಶಂಕರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.