
ಸಿಡ್ನಿ, ಜನವರಿ 02: ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 2-1 ರಿಂದ ಮುನ್ನಡೆ ಪಡೆದುಕೊಂಡಿದೆ.
ಅಂತಿಮ ಟೆಸ್ಟ್ ಪಂದ್ಯವು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.ಈ ಪಂದ್ಯಕ್ಕೆ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಲಭ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅಶ್ವಿನ್ ಅವರು ನಾಲ್ಕನೇ ಪಂದ್ಯಕ್ಕಾಗಿ ನೆಟ್ ಅಭ್ಯಾಸದಲ್ಲಿ ತೊಡಗಿದ್ದರು.
ಏಷ್ಯಾಕಪ್ ಟೂರ್ನಿ ವೇಳೆ ಗಾಯಾಳಾಗಿ ಭಾರತ ತಂಡದಿಂದ ಹೊರ ಬಿದ್ದಿದ್ದ ಪಾಂಡ್ಯ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಆಸೀಸ್ ವಿರುದ್ಧದ 4ನೇ ಟೆಸ್ಟ್ಗೆ ಲಭ್ಯರಿದ್ದಾರೆ. ಇನ್ನೊಂದೆಡೆ ರೋಹಿತ್ ಶರ್ಮ ಅವರು ತಮ್ಮ ನವಜಾತ ಶಿಶು ಕಾಣಲು ಭಾರತಕ್ಕೆ ಮರಳಿದ್ದಾರೆ.
4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 31 ರನ್ ಜಯ ಗಳಿಸಿತ್ತು. ಆದರೆ, ದ್ವಿತೀಯ ಟೆಸ್ಟ್ನಲ್ಲಿ ಚತುರ ಆಟ ಆಡಿದ್ದ ಆಸೀಸ್ 146 ರನ್ನಿಂದ ಪಂದ್ಯವನ್ನು ವಶ ಪಡಿಸಿಕೊಂಡಿತ್ತು. ಎಂಸಿಜಿಯಲ್ಲಿ ನಡೆದ ಮೂರನೇ ಭಾರತ ಗೆದ್ದುಕೊಂಡಿತು.
ಮೊದಲ ಟೆಸ್ಟ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಅಶ್ವಿನ್ ಅನಂತರ ಕಿಬ್ಬೊಟ್ಟೆ ನೋವಿಗೆ ತುತ್ತಾಗಿ ಪರ್ತ್ (ದ್ವಿತೀಯ) ಟೆಸ್ಟ್ನಿಂದ ಹೊರಗಿದ್ದರು. ಪರ್ತ್ ಟೆಸ್ಟ್ನಿಂದ ವಂಚಿತರಾಗಿದ್ದ ಜಡೇಜಾ ಕೂಡ ಭುಜದ ನೋವಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸಿಡ್ನಿ ಟೆಸ್ಟಿಗಾಗಿ ಭಾರತ ತಂಡ : ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ(ಉಪ ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರವಾಲ್, ಚೇತೇಶ್ವರ್ ಪೂಜಾರಾ, ಹನುಮ ವಿಹಾರಿ, ರಿಷಬ್ ಪಂತ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಕುಲದೀಪ್ ಯಾದವ್ ಹಾಗೂ ಆರ್ ಅಶ್ವಿನ್.