
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅಂತಿಮ ಘಟ್ಟಕ್ಕೆ ತಲುಪಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದ್ದು ಮೂರನೇ ಪಂದ್ಯ ಸರಣಿಯ ನಿರ್ಣಾಯಕವೆನಿಸಿದೆ. ವಿಶಾಖಪಟ್ಟಣಂನಲ್ಲಿ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಕೊನೆಯ ಪಂದ್ಯದಲ್ಲಿ ಯಾವ ರೀತಿಯಾಗಿ ಕಮ್ಬ್ಯಾಕ್ ಮಾಡಲಿದೆ ಎಂಬುದು ಈಗ ಉಳಿದಿರುವ ಕುತೂಹಲ.
ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಓರ್ವ ದಾಂಡಿಗನ ಪ್ರದರ್ಶನ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಟಿ20 ಮಾದರಿಯಲ್ಲಿ ನಂಬರ್ 1 ಬ್ಯಾಟರ್ ಎನಿಸಿರುವ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲಿ ವಿಫಲವಾಗುತ್ತಲೇ ಇದ್ದಾರೆ. ಅದರಲ್ಲೀ ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಸೂರ್ಯ ಎರಡು ಪಂದ್ಯದಲ್ಲಿಯೂ ಮೊದಲ ಎಸೆತಕ್ಕೇ ವಿಕೆಟ್ ಕಳೆದುಕೊಂಡಿದ್ದು ಸಾಕಷ್ಟು ಪ್ರಶ್ನೆಗಳು ಏಳುವಂತೆ ಮಾಡಿದೆ. ಈ ವಿಚಾರವಾಗಿ ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದು ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆ ಆತಂಕಗೊಂಡಿಲ್ಲ ಎಂದಿದ್ದಾರೆ.
"ಸೂರ್ಯ ಬಗ್ಗೆ ನಿಜಕ್ಕೂ ಕಳವಳಗೊಂಡಿಲ್ಲ. ಅವರಿಗೆ ಎರಡು ಅದ್ಭುತವಾದ ಎಸೆತಗಳು ಎದುರಾದವು.ಒಂದು ವಿಚಾರವೆಂದರೆ ಸೂರ್ಯ 50 ಓವರ್ಗಳ ಮಾದರಿಯನ್ನು ಕಲಿಯುತ್ತಿದ್ದಾರೆ. ಟಿ20 ಪಂದ್ಯ ಸ್ವಲ್ಪ ಭಿನ್ನವಾಗಿರುವ ಮಾದರಿ. ಟಿ20 ಮಾದರಿಯಲ್ಲಿ ಅವರು ಐಪಿಎಲ್ನಲ್ಲಿ 10 ವರ್ಷಗಳ ಕಾಲ ಆಡಿರುವ ಅನುಭವ ಹೊಂದಿದ್ದಾರೆ" ಎಂದಿದ್ದಾರೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್.
"ಸೂರ್ಯ ಸಾಕಷ್ಟು ಪ್ರಮಾಣದಲ್ಲಿ ಟಿ20 ಆಡಿದ್ದಾರೆ. ಸಾಕಷ್ಟು ಒತ್ತಡದ ಟಿ20 ಪಂದ್ಯಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಐಪಿಎಲ್ ಇರುವಂತೆ ಏಕದಿನ ಮಾದರಿಯಲ್ಲಿ ದೇಶೀಯ ಮಾದರಿಯಲ್ಲಿ ವಿಜಯ್ ಹಜಾರೆ ಟೂರ್ನಿಯನ್ನು ಹೊರತುಪಡಿಸಿ ಅಂಥಾ ಒತ್ತಡದ ಟೂರ್ನಿ ಇಲ್ಲ. ಹಾಗಿದ್ದರೂ ಟಿ20 ಮಾದರಿಯಲ್ಲಿ ಆಡಿರುವಂತೆ ಸಾಕಷ್ಟು ಪ್ರಮಾಣದಲ್ಲಿ ಅವರು ಏಕದಿಮ ಮಾದರಿಯಲ್ಲಿ ಆಡಿದ ಅನುಭವ ಹೊಂದಿಲ್ಲ. ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿ ನಾವು ತಾಲ್ಂಎಯಿಂದ ಇರಬೇಕಾಗುತ್ತದೆ. ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದನ್ನು ಕೂಡ ನಾವು ನೋಡಿದ್ದೇವೆ" ಎಂದಿದ್ದಾರೆ ರಾಹುಲ್ ದ್ರಾವಿಡ್.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಸಂಭಾವ್ಯ ಆಡುವ ಬಳಗ
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಶೈನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಶಾನ್ ಅಬಾಟ್, ನಾಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ
ಭಾರತ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ