ಬೆಂಗಳೂರು, ಸೆ. 26: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ನಾಲ್ಕನೇ ಪಂದ್ಯವು ನಗರದ ಎ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದ್ದರೂ, ಪಂದ್ಯ ನಿಗದಿಯಂತೆ ನಡೆಯಲಿದೆ ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ಹೇಳಿದ್ದಾರೆ.
ಐದು ಪಂದ್ಯಗಳ ಏಕದಿನ ಸರಣಿಯನ್ನು 3-0ರಲ್ಲಿ ಜಯಿಸಿರುವ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡವು ಸೆಪ್ಟಂಬರ್ 28 ರಂದು ಬೆಂಗಳೂರಿನಲ್ಲಿ 4ನೇ ಏಕದಿನ ಪಂದ್ಯವಾಡಲಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರದೇಶ ಸೇರಿದಂತೆ ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಸೆ. 28ರಂದು ಪಂದ್ಯ 1.30 pm ರಿಂದ ಪಂದ್ಯ ಆರಂಭವಾಗಲಿದ್ದು, ರಾತ್ರಿ ವೇಳೆ ಬೆಂಗಳೂರಿನಲ್ಲಿ ಶೇ 80ರಷ್ಟು ಮಳೆ ಸಂಭವ ಹೆಚ್ಚಿದೆ.
ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್ ಅಳವಡಿಸಲಾಗಿದೆ, ಭಾರೀ ಪ್ರಮಾಣದ ಮಳೆಯಾದರೂ, ಮಳೆ ನಿಂತ ಸುಮಾರು 15 ನಿಮಿಷದಲ್ಲೇ ನೀರು ಇಂಗಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಿದೆ. ಹೀಗಾಗಿ ಪಂದ್ಯವನ್ನು ಎಂದಿನಂತೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹೇಳಿದೆ.
ಚೆನ್ನೈನಲ್ಲಿ ನಡೆದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. 21 ಓವರ್ ಗೆ ಆಸ್ಟ್ರೇಲಿಯಾ ಇನ್ನಿಂಗ್ಸ್ ಕಡಿತ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 2013ರ ನವೆಂಬರ್ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ.
ಇಂದೋರ್ ನಿಂದ ಉಭಯ ತಂಡಗಳು ಸೋಮವಾರ ಸಂಜೆ ವೇಳೆಗೆ ಬೆಂಗಳೂರಿಗೆ ಬಂದಿಳಿದಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್ ಅಭ್ಯಾಸ ಜಾರಿಯಲ್ಲಿದೆ. ಹವಾಮಾನ ವೈಪರಿತ್ಯದ ನಡುವೆ ಪಂದ್ಯ ನಡೆಸಲು ಕೆಎಸ್ ಸಿಎ ಸಜ್ಜಾಗಿದೆ.