
ಬೆಂಗಳೂರು, ಜನವರಿ 18: ಗಾಯಾಳಾಗಿರುವ ಟೀಮ್ ಇಂಡಿಯಾ ಓಪನರ್ಸ್ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಬೆಂಗಳೂರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ-ಭಾರತ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಾರಾ? ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಭಾನುವಾರ (ಜನವರಿ 19) ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ.
ರಾಜ್ಕೋಟ್ನಲ್ಲಿ ಶುಕ್ರವಾರ (ಜನವರಿ 17) ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದರು. ಅಂದರೆ ಧವನ್ ಆಸ್ಟ್ರೇಲಿಯಾ ಇನ್ನಿಂಗ್ಸ್ನಲ್ಲಿ ಮೈದಾನಕ್ಕಿಳಿಯಲೇ ಇಲ್ಲ. ರೋಹಿತ್ ಆಸೀಸ್ ಇನ್ನಿಂಗ್ಸ್ನ 43ನೇ ಓವರ್ ವೇಳೆ ಮೈದಾನದಿಂದ ಹೊರ ನಡೆದಿದ್ದರು.
ಭಾರತದ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧವನ್ಗೆ ಚೆಂಡಿನೇಟು ತಗಲಿ ಗಾಯಗೊಂಡಿದ್ದರು. ಇತ್ತ ರೋಹಿತ್ ಶರ್ಮಾ ಆಸೀಸ್ ಇನ್ನಿಂಗ್ಸ್ನಲ್ಲಿ ಬೌಂಡರಿ ತಡೆಯಲೆತ್ನಿಸಿ ಕೈಗೆ ಗಾಯ ಮಾಡಿಕೊಂಡಿದ್ದರು. ಮೂರು ಪಂದ್ಯಗಳ ಏಕದಿನ ಸರಣಿ ಈಗ 1-1ರಿಂದ ಸಮಬಲಗೊಂಡಿದ್ದು ನಿರ್ಣಾಯಕ ಪಂದ್ಯದಲ್ಲೇ ಇಬ್ಬರು ಆಟಗಾರರ ಗಾಯ ತಂಡವನ್ನು ಚಿಂತೆಗೀಡು ಮಾಡಿದೆ.
ರೋಹಿತ್ ಚೇತರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ವಿರಾಟ್ ಕೊಹ್ಲಿ, 'ರೋಹಿತ್ ಅವರನ್ನು ಈಗತಾನೇ ವಿಚಾರಿಸಿದೆ. ಅವರ ಎಡಗೈಗೆ ಸಣ್ಣಮಟ್ಟಿನ ಗಾಯವಾಗಿದೆ. ಇಲ್ಲಿ ಗಾಬರಿಪಡುವಂತದ್ದೇನಿಲ್ಲ. ಶರ್ಮಾ ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ,' ಎಂದಿದ್ದಾರೆ. ಮಾಹಿತಿಯ ಪ್ರಕಾರ ರೋಹಿತ್ ಧವನ್ ಇಬ್ಬರೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.