
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಪರವಾಗಿ ಬೂಮ್ರಾ ಅವಕಾಶ ಪಡೆಯದಿರುವುದು ಅಭಿಮಾನಿಗಳಲ್ಲಿ ಅಚ್ಚರಿಗೂ ಕಾರಣವಾಗಿದೆ.
ಕೇವಲ ಟೀಮ್ ಇಂಡಿಯಾ ಮಾತ್ರವಲ್ಲ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ ಇಂಗ್ಲೆಂಡ್ ತಂಡವೂ ಕೂಡ ತನ್ನ ವಿನ್ನಿಂಗ್ ತಂಡವನ್ನು ಕೂಡ ಬದಲಾಯಿಸಿಕೊಂಡಿದೆ. ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಸಹಿತ ನಾಲ್ವರು ಆಟಗಾರರಿಗೆ ವಿಶ್ರಾಂತಿಯನ್ನು ನೀಡಿದೆ.
ಇಂಗ್ಲೆಂಡ್ ತಂಡದಲ್ಲಿ ಈ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳುವಂತೆ ರೊಟೇಶನ್ ಪದ್ದತಿಯನ್ನು ಅಳವಡಿಸಿಕೊಂಡಿದೆ. ಆಟಗಾರರು ಅತಿಯಾದ ಕ್ರಿಕೆಟ್ನಿಂದ ಬಳಲುವುದನ್ನು ತಪ್ಪಿಸುವ ದೃಷ್ಟಿಯಲ್ಲಿ ಈ ಬದಲಾವಣೆಯನ್ನು ಇಂಗ್ಲೆಂಡ್ ತಂಡ ಸತತವಾಗಿ ಮಾಡಿಕೊಂಡು ಬಂದಿದೆ. ಇದೇ ಕಾರಣದಿಂದಾಗಿ ಜೇಮ್ಸ್ ಆಂಡರ್ಸನ್ ಎರಡನೇ ಟೆಸ್ಟ್ನಲ್ಲಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ.
ಇನ್ನು ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯದಿರಲು ಕೂಡ ಆಟದ ಒತ್ತಡವನ್ನು ಕಡಿಮೆ ಮಾಡುವುದೇ ಆಗಿದೆ. ಸತತ ಪಂದ್ಯಗಳಿಂದ ವಿಶ್ರಾಂತಿಯನ್ನು ನೀಡಲು ಈ ಕ್ರಮವನ್ನು ತಂಡದ ಮ್ಯಾನೇಜ್ಮೆಂಟ್ ತೆಗೆದುಕೊಂಡಿದೆ. ಅಹ್ಮದಾಬಾದ್ನಲ್ಲಿ ನಡೆಯುವ ಮೂರನೇ ಪಂದ್ಯ ಡೇ ನೈಟ್ ಪಂದ್ಯವಾಗಿರುವ ಕಾರಣ ಹಾಗೂ ಅಂತಿಮ ಪಂದ್ಯದಲ್ಲಿ ಬೂಮ್ರಾ ಲಭ್ಯತೆ ತಂಡಕ್ಕೆ ಅಗತ್ಯವಾಗಿರುತ್ತದೆ ಎಂದು ಭಾವಿಸಿ ಎರಡನೇ ಟೆಸ್ಟ್ ಪಂದ್ಯಕ್ಕೆ ಬೂಮ್ರಾ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ.
ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು "ಜಸ್ಪ್ರೀತ್ ಬೂಮ್ರಾ ಅವರಿಗೆ ಒತ್ತಡವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಅಂತಿಮ ಎರಡನು ಪಂದ್ಯಗಳಲ್ಲಿ ಅವರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಮಾಡಲಾಗಿದೆ" ಎಂದು ವಿರಾಟ್ ಕೊಹ್ಲಿ ವಿವರಿಸಿದರು.