ಚೇತೇಶ್ವರ್ ಪೂಜಾರ
ಭಾರತ ಕ್ರಿಕೆಟ್ನ ಜೂನಿಯರ್ ವಾಲ್ ಎಂದೇ ಹೆಸರು ಮಾಡಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಾಗೆ ಪ್ರಸ್ತುತ ಕೈಗೊಂಡಿರುವ ಇಂಗ್ಲೆಂಡ್ ಪ್ರವಾಸ ಕೊನೆಯ ಪ್ರವಾಸವಾಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಚೇತೇಶ್ವರ್ ಪೂಜಾರ ಕಳೆದ 18 ಟೆಸ್ಟ್ ಪಂದ್ಯಗಳಿಂದ ಯಾವುದೇ ಶತಕವನ್ನು ಬಾರಿಸದೆ ಮಂಕಾಗಿರುವುದು. ಆಸ್ಟ್ರೇಲಿಯಾ ವಿರುದ್ಧ 2018ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅತ್ಯದ್ಬುತ ಆಟವನ್ನಾಡಿ ಮಿಂಚಿದ್ದ ಚೇತೇಶ್ವರ್ ಪೂಜಾರ ಅದಾದ ನಂತರ ದೊಡ್ಡ ಮೊತ್ತವನ್ನು ಕಲೆ ಹಾಕಿಯೇ ಇಲ್ಲ. ಅಲ್ಲದೆ ಯುವ ಆಟಗಾರರಾದ ಕೆಎಲ್ ರಾಹುಲ್ ಮತ್ತು ಹನುಮ ವಿಹಾರಿಗೆ ತಂಡದಲ್ಲಿ ಸತತವಾಗಿ ಸ್ಥಾನ ನೀಡುವ ಯೋಜನೆಯಲ್ಲಿ ಆಯ್ಕೆಗಾರರಿದ್ದು, ತಂಡದಿಂದ ತನ್ನನ್ನು ಕೈಬಿಡದೆ ಇರಬೇಕಾದರೆ ಚೇತೇಶ್ವರ್ ಪೂಜಾರ ಪ್ರಸ್ತುತ ಇಂಗ್ಲೆಂಡ್ ಸರಣಿಯಲ್ಲಿ ದೊಡ್ಡ ಮೊತ್ತ ಕಲೆ ಹಾಕಲೇಬೇಕಿದೆ. ಇಲ್ಲದಿದ್ದರೆ ಈ ಪ್ರವಾಸ ಚೇತೇಶ್ವರ್ ಪೂಜಾರ ಪಾಲಿಗೆ ಕೊನೆಯ ಪ್ರವಾಸವಾಗಬಹುದು.
ವೃದ್ಧಿಮಾನ್ ಸಹಾ
36 ವರ್ಷದ ವೃದ್ದಿಮಾನ್ ಸಹಾ ಇತ್ತೀಚಿನ ಕೆಲ ಟೆಸ್ಟ್ ಸರಣಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಎಡವುತ್ತಿರುವ ವೃದ್ದಿಮಾನ್ ಸಹಾ ಇತ್ತೀಚೆಗೆ ನಡೆದ ಕೆಲ ಸರಣಿಗಳ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿಯೂ ಸಹ ವಿಫಲರಾಗಿದ್ದಾರೆ. ಅತ್ತ ರಿಷಭ್ ಪಂತ್ ಉತ್ತಮ ಫಾರ್ಮ್ನಲ್ಲಿರುವುದು ವೃದ್ಧಿಮಾನ್ ಸಹಾಗೆ ತಂಡದಲ್ಲಿ ಅವಕಾಶ ಸಿಗದಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲಿ ಅವಕಾಶ ಸಿಕ್ಕರೆ ಅದನ್ನು ವೃದ್ದಿಮಾನ್ ಸಹ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ, ಇಲ್ಲದಿದ್ದರೆ ಮುಂದಿನ ಸರಣಿಗಳಲ್ಲಿ ವೃದ್ದಿಮಾನ್ ಸಹಾಗೆ ಅವಕಾಶ ಸಿಗುವುದು ಕಷ್ಟ ಎಂದೇ ಹೇಳಬಹುದು. ಅಲ್ಲದೆ ವೃದ್ಧಿಮಾನ್ ಸಾಹಗೆ ವಯಸ್ಸಿನ ಪಟ್ಟಿ ಕೂಡ ಉಂಟಾಗಬಹುದಾಗಿದ್ದು, ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ನಂತರ ಯಾವುದೇ ಪಂದ್ಯದಲ್ಲಿಯೂ ವೃದ್ದಿಮಾನ್ ಸಹಾ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ.
ಇಶಾಂತ್ ಶರ್ಮಾ
ಭಾರತದ ವೇಗಿ ಇಶಾಂತ್ ಶರ್ಮಾಗೂ ಕೂಡ ಈ ಬಾರಿಯ ಇಂಗ್ಲೆಂಡ್ ಪ್ರವಾಸ ಬಹುಮುಖ್ಯವಾಗಿದೆ. ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿಯೂ ಕೂಡ ಇಶಾಂತ್ ಶರ್ಮ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು. ಹಾಗೂ ಇಶಾಂತ್ ಶರ್ಮಾ ಜಾಗಕ್ಕೆ ಮೊಹಮ್ಮದ್ ಸಿರಾಜ್ ಹೆಸರು ಕೂಡ ಸಾಕಷ್ಟು ಕೇಳಿ ಬರುತ್ತಿದ್ದು ಮುಂದಿನ ಸರಣಿಗಳಲ್ಲಿ ತಂಡದಲ್ಲಿ ಸ್ಥಾನ ಸಿಗಬೇಕೆಂದರೆ ಇಶಾಂತ್ ಶರ್ಮಾ ಈ ಬಾರಿಯ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಇದೆ.