
ಭಾರತದ ಪರವಾಗಿ ಆರ್ ಅಶ್ವಿನ್ ಆಡಲೇಬೇಕು
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆರ್ ಅಶ್ವಿನ್ ಆಡಲೇಬೇಕಾದ ಅನಿವಾರ್ಯತೆಯಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹೇಳಿದ್ದಾರೆ. ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಅನುಭವಿ ಅಶ್ವಿನ್ ಅಗತ್ಯ ತಂಡಕ್ಕೆ ತುಂಬಾ ಇದೆ ಎಂದು ಹೇಳಿರುವ ನಾಸಿರ್ ಹುಸೇನ್ ಅದಕ್ಕೆ ವಿವರಣೆಯನ್ನು ಕೂಡ ನೀಡಿದ್ದಾರೆ.

'ಆತ ನಂಬರ್ 2 ಆಟಗಾರ'
ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವ ನಾಸಿರ್ ಹುಸೇನ್ ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿಯೇ ಆರ್ ಅಶ್ವಿನ್ ಅವರನ್ನು ಆಡಿಸಬೇಕಾಗಿತ್ತು ಎಂದಿದ್ದಾರೆ. ಆದರೆ ಈಗ ಓವಲ್ನಲ್ಲಿ ಅವರನ್ನು ಭಾರತ ಆಡಿಸಬೇಕಿದೆ ಎಂದಿದ್ದಾರೆ. "ಭಾರತ ತಂಡ ತಂಡದಲ್ಲಿರುವ ಆಫ್ ಸ್ಪಿನ್ನರ್ ಆರ್ ಅಶ್ವಿನ್ ವಿಶ್ವದ ನಂಬರ್ 2 ಬೌಲರ್ ಆಗಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಐದು ಶತಕಗಳನ್ನು ಸಿಡಿಸಿರುವ ಬ್ಯಾಟ್ಸ್ಮನ್ ಆತ. ಇಂಗ್ಲೆಂಡ್ ತಂಡದಲ್ಲಿರುವ ಐವರು ಎಡಗೈ ಬ್ಯಾಟ್ಸ್ಮನ್ಗಳ ವಿರುದ್ಧ ಅವರು ಹೆಡಿಂಗ್ಲೆಯಲ್ಲಿ ಕಣಕ್ಕಿಳಿಯಲೇ ಬೇಕಿತ್ತು. ಈಗ ಓವಲ್ನಲ್ಲಿ ಅವರಿಗೆ ಅವಕಾಶವನ್ನು ನೀಡಲೇಬೇಕಿದೆ" ಎಂದಿದ್ದಾರೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್.

ಮತ್ತೋರ್ವ ಬ್ಯಾಟ್ಸ್ಮನ್ ಜೊತೆಗೆ ಕಣಕ್ಕಿಳಿಯಲಿ
ಇನ್ನು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಮತ್ತೊಂದು ಪ್ರಮುಖ ಸಲಹೆಯನ್ನು ನೀಡಿದ್ದಾರೆ ನಾಸಿರ್ ಹುಸೇನ್. ಈ ಸರಣಿಯಲ್ಲಿ ಭಾರತ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಒಟ್ಟು ಐದು ಬೌಲರ್ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಈ ರಣತಂತ್ರದಲ್ಲಿ ಬದಲಾವಣೆ ಮಾಡಿಕೊಂಡು ಐವರು ಬೌಲರ್ಗಳ ಬದಲಿಗೆ ನಾಲ್ವರು ಬೌಲರ್ಗಳನ್ನು ಕಣಕ್ಕಿಳಿಸಬೇಕು ಎಂದಿದ್ದಾರೆ. ಈ ಮೂಲಕ ಓರ್ವ ಹೆಚ್ಚುವರಿ ಬ್ಯಾಟ್ಸ್ಮನ್ ತಂಡಕ್ಕೆ ದೊರೆಯುತ್ತಾರೆ. ಆಗ ರಿಷಭ್ ಪಂತ್ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಹೆಚ್ಚುವರಿ ಬ್ಯಾಟ್ಸ್ಮನ್ ಆರನೇ ಕ್ರಮಾಂಕದಲ್ಲಿ ಆಡಿಸಬೇಕು" ಎಂದಿದ್ದಾರೆ.

ಅಶ್ವಿನ್ ಸೇರ್ಪಡೆ ಬಗ್ಗೆ ಇದೇ ಮಾತು ಹೇಳಿದ್ದ ಚೋಪ್ರಾ
ಇನ್ನು ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್ಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ನಾಲ್ಕನೇ ಪಂದ್ಯದಲ್ಲಿ ಅವಕಾಶ ನೀಡುವ ವಿಚಾರವಾಗಿ ಆಕಾಶ್ ಚೋಪ್ರ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತಲೆಯಲ್ಲಿ ಆರ್ ಅಶ್ವಿನ್ ಅವರ ಸೇರ್ಪಡೆಯ ವಿಚಾರ ಖಂಡಿತಾ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನು ಕೂಡ ವಿವರಿಸಿದ್ದಾರೆ. "ಆರ್ ಅಶ್ವಿನ್ ಬಗ್ಗೆ ಮಾತನಾಡುತ್ತಾ, ನೀವು ಓವಲ್ನಲ್ಲಿ ಆಡುತ್ತಿದ್ದೀರಿ. ಅಲ್ಲಿ ಚೆಂಡು ತಿರುವು ಪಡೆಯುತ್ತದೆ ಹಾಗೂ ಫ್ಲ್ಯಾಟ್ ಆಗಿದೆ. ಈ ಅಂಗಳದಲ್ಲಿ ಆರ್ ಅಶ್ವಿನ್ ಸರ್ರೆ ತಂಡದ ಪರವಾಗಿ ಕೌಂಟಿ ತಂಡದಲ್ಲಿಯೂ ಕಣಕ್ಕಿಳಿದಿದ್ದರು. ಆತನಿಗೆ ಈ ಪಿಚ್ನ ವರ್ತನೆಯ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ಹೀಗಾಗಿ ಅವರ ಆಯ್ಕೆಯನ್ನು ಖಂಡಿತಾ ಪರಿಗಣಿಸುವ ಸಾಧ್ಯತೆಯಿದೆ" ಎಂದು ಚೋಪ್ರಾ ವಿವರಿಸಿದರು.
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ ಪಿಚ್ಅನ್ನು ಗಮನಿಸಿದ ಬಳಿಕ ಹಾಗೂ ತಂಡದ ಕಾಂಬಿನೇಶನ್ನ ಗಮನದಲ್ಲಿಟ್ಟುಕೊಂಡು ಈ ಸೇರ್ಪಡೆಯ ಬಗ್ಗೆ ತಂಡ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ. "ಪಿಚ್ಅನ್ನು ನೀವು ನೇರವಾಗಿ ವೀಕ್ಷಿಸುವ ವರೆಗೆ ಈ ಪ್ರಶ್ನೆಗೆ ಪ್ರತಿಕ್ರಿಯೆಯನ್ನು ನಿಖರವಾಗಿ ನೀಡಲು ಸಾಧ್ಯವಿಲ್ಲ. ಇದು ನಾಲ್ವರು ಬೌಲರ್ಗಳನ್ನು ಬಳಸಿಕೊಳ್ಳಬೇಕಾದ ಪಿಚ್ ಅಥವಾ ಕೇವಲ ಓರ್ವ ಸ್ಪಿನ್ನರ್ ಜೊತೆಗೆ ನೀವು ಆಡುತ್ತೀರಾ? ಆಗ ನಿಮ್ಮಲ್ಲಿ ಜಡೇಜಾ ಅಥವಾ ಆರ್ ಅಶ್ವಿನಾ ಎಂಬ ಪ್ರಶ್ನೆ ಮೂಡುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರಾ.
ಈ ಮಧ್ಯೆ ಮೂರನೇ ಟೆಸ್ಟ್ನ ಬಳಿಕ ಆರ್ ಅಶ್ವಿನ್ ಮೊಣಕಾಲಿನ ನೋವಿಗೆ ಒಳಗಾಗಿದ್ದು ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ. ಈ ಗಾಯದ ತೀವ್ರತೆಯನ್ನು ಗಮನಿಸಿದ ಬಳಿಕ ಆರ್ ಅಶ್ವಿನ್ಗೆ ಆಡುವ ಬಳಗದಲ್ಲಿ ಸ್ಥಾನ ದೊರೆಯುವ ಅವಕಾಶಗಳು ಕೂಡ ಖಚಿತವಾಗಲಿದೆ.

ಮಹತ್ವದ ಬದಲಾವಣೆ ಮಾಡುತ್ತಾ ಟೀಮ್ ಇಂಡಿಯಾ
ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಈಗ ನಿರ್ಣಾಯಕ ಘಟ್ಟವನ್ನು ತಲುಪಿದೆ. ಮೂರು ಪಂದ್ಯಗಳು ಮುಕ್ತಾಯವಾಗಿದ್ದು ಅಂತಿಮ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಆದರೆ ಇಂಗ್ಲೆಂಡ್ ನಲದಲ್ಲಿ ಸರಣಿ ಗೆದ್ದು ಈಗಾಗಲೇ ದಶಕ ಕಳೆದಿರುವ ಹಿನ್ನೆಲೆಯಲ್ಲಿ ಭಾರತ ಮತ್ತೊಮ್ಮೆ ಈ ಸಾಧನೆ ಮಾಡಲು ಹಾತೊರೆಯುತ್ತಿದೆ. ಹೀಗಾಗಿ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಬೇಕೆಂಬ ಒತ್ತಾಯಗಳು ಜೋರಾಗಿದೆ. ಚೇತೇಶ್ವರ್ ಪೂಜಾರ ಕಳೆದ ಪಂದ್ಯದಲ್ಲಿ ಫಾರ್ಮ್ ಕಂಡುಕೊಂಡಿದ್ದು ಈ ಮೂಲಕ ಟೀಕಾಕಾರರ ಬಾಯಿಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಉಪನಾಯಕ ರಹಾನೆ ಬದಲಿಗೆ ಬೇರೊಬ್ಬ ಆಟಗಾರನಿಗೆ ಅವಕಾಶ ನೀಡಬೇಕೆಂಬ ಮಾತುಗಳು ಕೇಲಿ ಬರುತ್ತಿದೆ. ಆದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ಅಂತಾ ಮಹತ್ವದ ಬದಲಾವಣೆಯಾಗುವ ಸಾಧ್ಯತೆಗಳು ತೀರಾ ಕಡಿಮೆಯಿದೆ.


Click it and Unblock the Notifications












