
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ಆಯ್ಕೆ ಮ್ಯಾನೇಜ್ಮೆಂಟ್ಗೆ ನಿಜಕ್ಕೂ ತಲೆನೋವಾಗಿ ಪರಿಣಮಿಸಿದೆ. ಆಡುವ ಬಳಗದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಯಾರನ್ನು ಬೆಂಚ್ ಕಾಯಿಸಬೇಕು ಎಂಬುದು ಸವಾಲಾಗಿದೆ. ಈ ಮಧ್ಯೆ ಟೀಮ್ ಇಂಡಿಯಾ ಸೀಮಿತ ಓವರ್ಗಳ ಆರಂಭಿಕ ಆಟಗಾರ ಶಿಖರ್ ಧವನ್ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.
ಚುಟುಕು ಕ್ರಿಕೆಟ್ನಲ್ಲಿ ಆರಂಭಿಕರಾಗಿ ಇತ್ತೀಚಿನ ಸರಣಿಗಳಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಜೋಡಿ ಅದ್ಭುತವಾದ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಹೀಗಾಗಿ ಈ ಜೋಡಿಯನ್ನು ಬೇರ್ಪಡಿಸುವ ಸಾಧ್ಯತೆಯಿಲ್ಲ. ಈ ಇಬ್ಬರಲ್ಲಿ ಓರ್ವ ಆಟಗಾರ ಗಾಯಗೊಂಡಂತಾ ಸಂದರ್ಭದಲ್ಲಿ ಮಾತ್ರವೇ ಧವನ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಈಗಿನ ಸ್ಥಿತಿಯಲ್ಲಿ ಟಿ20 ಮಾದರಿಯಲ್ಲಿ ಶಿಖರ್ ಧವನ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇಲ್ಲ. ಶಿಖರ್ ಧವನ್ ಈಗ ಟೀಮ್ ಇಂಡಿಯಾದ ಮೊದಲ ಆಯ್ಕೆಯ ಬ್ಯಾಕ್ಅಪ್ ಓಪನರ್ ಆಗಿ ಉಳಿದುಕೊಳ್ಳಲಿದ್ದಾರೆ.
ಕಳೆದ ಬಾರಿಯ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಅತಿ ಹೆಚ್ಚಿನ ರನ್ ಗಳಿಸಿದ ಆಟಗಾರನಾದರೆ ಶಿಖರ್ ಧವನ್ ಎರಡನೇ ಗರಿಷ್ಠ ಸ್ಕೋರರ್ ಎನಿಸಿದ್ದರು. ಆದರೆ ಈಗ ಭಾರತೀಯ ತಂಡದಲ್ಲಿ ಅವಕಾಶವನ್ನು ಪಡೆಯಲು ಕಷ್ಟ ಪಡಬೇಕಾದ ಸಂದರ್ಭ ಉಂಟಾಗಿದೆ.
ಭಾರತದ ಮಧ್ಯಮ ಕ್ರಮಾಂಕದಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದ್ದು ಶ್ರೇಯಸ್ಸ ಐಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಮಧ್ಯೆ ಯಾರು ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.