
ಬೆಂಗಳೂರು, ಸೆಪ್ಟೆಂಬರ್ 13 : ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಪಡೆ 4-1ರ ಅಂತರದಲ್ಲಿ ಸೋಲಲು ಕಾರಣವೇನು? ಇಡೀ ತಂಡ ವೈಫಲ್ಯವೇ? ನಾಯಕ ಕೊಹ್ಲಿ ತಂತ್ರಗಾರಿಕೆಯಲ್ಲಿ ಸೋತರೇ? ಹೀಗೆ ಸರಣಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಹೈದಾರಾಬಾದಿನ ದಿಗ್ಗಜ ಕ್ರಿಕೆಟರ್, ಬ್ಯಾಟ್ಸ್ ಮನ್ ಗಳು ಮಾಡಿದ ತಪ್ಪನ್ನು ಮತ್ತೆ ಮತ್ತೆ ರಿಪೀಟ್ ಮಾಡಿದ್ದೇ ತಂಡಕ್ಕೆ ಮುಳುವಾಯಿತು, ಬಾಲಂಗೋಚಿಗಳನ್ನು ಬೇಗನೇ ಔಟ್ ಮಾಡುವಲ್ಲಿ ವಿಫಲರಾದರು ಎಂದಿದ್ದಾರೆ.
ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಅವರು ಕೊನೆ ಪಂದ್ಯದಲ್ಲಿ ತೋರಿದ ಧೈರ್ಯ, ಸ್ಥಿರ ಪ್ರದರ್ಶನವನ್ನು ಮೆಚ್ಚಿದ ಲಕ್ಷ್ಮಣ್, ವಿಶ್ವದ ನಂ.1 ತಂಡ ಎನಿಸಿಕೊಂಡರೂ ಉತ್ತಮ ಆರಂಭ ಪಡೆಯಲು ಆಗಲಿಲ್ಲ ಎಂಬುದು ತಂತ್ರಗಾರಿಕೆಯ ವೈಫಲ್ಯ ಎಂದರು.
ಟ್ರೆಂಟ್ ಬ್ರಿಜ್ ಬಿಟ್ಟರೆ ಉಳಿದ ಕಡೆಗಳಲ್ಲಿ ಭಾರತ ತಂಡದಲ್ಲಿ ಯಾವುದೇ ಕಿಚ್ಚು ಕಂಡು ಬರಲಿಲ್ಲ. ಆದರೆ, ಇಂಗ್ಲೆಂಡ್ ತಂಡದಲ್ಲಿ ಪ್ರತಿಯೊಬ್ಬರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಅದರಲ್ಲೂ ಸೌಂಥಾಪ್ಟನ್ ನಲ್ಲಿ ಇಂಗ್ಲೆಂಡ್ ಆಡಿದ ರೀತಿಯನ್ನು ಉಲ್ಲೇಖಿಸಲೇಬೇಕು ಎಂದು ಹೇಳಿದರು.
ಭಾರತದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಎಂದೆನಿಸಿಕೊಂಡಿದ್ದ ಲಕ್ಷ್ಮಣ್ ಅವರು ಕೊನೆ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಬೇಕಿತ್ತು. ಕೆಎಲ್ ರಾಹುಲ್ ಅವರ ವಿಕೆಟ್ ಪತನದ ನಂತರ ಪಂತ್ ಅವರು ಗುರಿಯನ್ನು ಮುಂದಿಟ್ಟುಕೊಂಡು ಆಡಿದಂತೆ ತೋರಿತು. ಇದನ್ನು ತಪ್ಪು ಎನ್ನುವಂತಿಲ್ಲ. ಆದರೆ, ಈ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಎರಡೆ ಭಾರತದ ಆಯ್ಕೆಯಾಗಬೇಕಿತ್ತು ಎಂದು 2014ರ ಅಡಿಲೇಡ್ ಪಂದ್ಯವನ್ನು ಸ್ಮರಿಸಿದರು.