ಭಾರತ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರು ಗಾಯದ ಚೇತರಿಕೆಯಿಂದ ಸ್ಪರ್ಧಾತ್ಮಕ ಕ್ರಿಕೆಟ್ಗೆ ಹಿಂದಿರುಗಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ತಲಾ ಎರಡೆರಡು ವಿಕೆಟ್ ಪಡೆದು ಅದ್ಭುತವಾಗಿ ಮರಳಿದರು.
ಇದೇ ವೇಳೆ ಐರ್ಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ, ತಮ್ಮ ತಂಡವು ಸತತ ಎರಡನೇ ಗೆಲುವನ್ನು ದಾಖಲಿಸಲು ನೆರವಾದರು.

ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ನಾಯಕನೂ ಆಗಿರುವ ಜಸ್ಪ್ರೀತ್ ಬುಮ್ರಾ, ಎರಡನೇ ಪಂದ್ಯದಲ್ಲಿ ಕೇವಲ 15 ರನ್ಗಳಿಗೆ ಎರಡು ವಿಕೆಟ್ಗಳನ್ನು ಪಡೆದರು. ಡೆತ್-ಓವರ್ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
29 ವರ್ಷದ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್ನಲ್ಲಿ ಅಂತಿಮ ಓವರ್ ಬೌಲ್ ಮಾಡಿದರು ಮತ್ತು ಒಂದೇ ಒಂದು ರನ್ ಬಿಟ್ಟುಕೊಡಲಿಲ್ಲ. ಇದು ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಬೌಲ್ ಮಾಡಿದ 10ನೇ ಮೇಡನ್ (ರನ್ ರಹಿತ) ಓವರ್ ಆಗಿತ್ತು. ಇದು ಚುಟುಕು ಸ್ವರೂಪದಲ್ಲಿ ಯಾವುದೇ ಬೌಲರ್ನಿಂದ ಜಂಟಿ-ಅಧಿಕವಾಗಿದೆ.
ಭಾರತದವರೇ ಆದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ಸರಿಗಟ್ಟಿದರು. ಇನ್ನು ಈ ಅದ್ಭುತ ದಾಖಲೆಯನ್ನು ಸಾಧಿಸಲು ಅವರು 25 ಪಂದ್ಯಗಳನ್ನು ಕಡಿಮೆ ತೆಗೆದುಕೊಂಡರು.

ಉಗಾಂಡಾ ಕ್ರಿಕೆಟಿಗ ಫ್ರಾಂಕ್ ನ್ಸುಬುಗಾ ಟಿ20 ಪಂದ್ಯಗಳಲ್ಲಿ 15 ಮೇಡನ್ ಓವರ್ಗಳನ್ನು ಬೌಲ್ ಮಾಡಿದ್ದಾರೆ. ಆದರೆ ಅವರ ರಾಷ್ಟ್ರೀಯ ತಂಡವು ಐಸಿಸಿ ಪೂರ್ಣ ಸದಸ್ಯತ್ವ ಹೊಂದಿಲ್ಲ ಮತ್ತು ಟಿ20 ವಿಶ್ವಕಪ್ನಲ್ಲಿ ಆಡಿಲ್ಲ.
ಇದೇ ವೇಳೆ ಪಂದ್ಯದ ಸಮಯದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಹಾರ್ದಿಕ್ ಪಾಂಡ್ಯ ಅವರ ದಾಖಲೆಯನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು. ಜಸ್ಪ್ರೀತ್ ಬುಮ್ರಾ ಪ್ರಸ್ತುತ ಟಿ20 ಸ್ವರೂಪದಲ್ಲಿ 74 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇನ್ನು ಭಾರತ ತಂಡವು ಐರ್ಲೆಂಡ್ ತಂಡವನ್ನು 33 ರನ್ಗಳಿಂದ ಸೋಲಿಸಿ ಎರಡನೇ ಟಿ20 ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಉಪನಾಯಕ ರುತುರಾಜ್ ಗಾಯಕ್ವಾಡ್ 42 ಎಸೆತಗಳಲ್ಲಿ 58 ರನ್, ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 40 ರನ್ ಮತ್ತು ಕೊನೆಯಲ್ಲಿ ರಿಂಕು ಸಿಂಗ್ 21 ಎಸೆತಗಳಲ್ಲಿ 38 ರನ್ಗಳ ಮನಮೋಹಕ ಆಟದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಐರ್ಲೆಂಡ್ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 152 ರನ್ಗಳಿಗೆ ನಿಯಂತ್ರಣಗೊಂಡಿತು. ಪ್ರಸಿದ್ಧ್ ಕೃಷ್ಣ 29 ರನ್ಗೆ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ 37 ರನ್ಗೆ 2 ವಿಕೆಟ್ ಪಡೆದರು. ನಾಯಕ ಜಸ್ಪ್ರೀತ್ ಬುಮ್ರಾ 15 ರನ್ಗೆ 2 ವಿಕೆಟ್ ಪಡೆದು ಮಿಂಚಿದರು.
ಬುಧವಾರ, ಆಗಸ್ಟ್ 23ರಂದು ಡಬ್ಲಿನ್ನ ದಿ ವಿಲೇಜ್ನಲ್ಲಿ ಭಾರತ ಮತ್ತು ಐರ್ಲೆಂಡ್ ತಂಡಗಳು ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಗೆದ್ದು ಕ್ಲೀನ್ಸ್ವೀಪ್ ಮಾಡುವ ಗುರಿಯನ್ನು ಜಸ್ಪ್ರೀತ್ ಬುಮ್ರಾ ಬಳಗ ಹೊಂದಿದೆ.