
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ಈಗಾಗಲೇ ರೋಹಿತ್ ಶರ್ಮಾ ನೇತೃತ್ವವದ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದುಕೊಂಡಿದ್ದು ಎರಡನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಇದ್ದರೆ ನ್ಯೂಜಿಲೆಂಡ್ ತಂಡ ಸರಣಿ ಸಮಬಲಗೊಳಿಸುವ ಲೆಕ್ಕಾಚಾರದಲ್ಲಿದೆ.
ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಬ್ಯಾಟಿಂಗ್ ನಡೆಸಿತ್ತು. ದೊಡ್ಡ ಮೊತ್ತವನ್ನು ಗಳಿಸುವ ಸಾಧ್ಯತೆಯೂ ಇತ್ತು. ಆದರೆ ಅಂತಿಮ ಮೂರು ಓವರ್ಗಳಲ್ಲಿ ಭಾರತೀಯ ಬೌಲರ್ಗಳು ಗಳಿಸಿದ ಯಶಸ್ಸಿನಿಂದಾಗಿ ಕಿವೀಸ್ ಓಟಕ್ಕೆ ಕಡಿವಾಣ ಬಿತ್ತು. ಇದು ಭಾರತದ ಮೇಲುಗೈಗೆ ಕಾರಣವಾಯಿತು. ಹೀಗಾಗಿ ಈ ಹಂತದಲ್ಲಿ ಭಾರತದ ವಿರುದ್ಧ ರಣತಂತ್ರಕ್ಕೆ ಕಿವೀಸ್ ಪಡೆ ರಣತಂತ್ರವನ್ನು ಹೆಣೆಯಲಿದೆ.
ಮತ್ತೊಂದೆಡೆ ಟೀಮ್ ಇಂಡಿಯಾ ಅದ್ಭುತವಾದ ಆರಂಭವನ್ನು ಕಳೆದ ಪಂದ್ಯದಲ್ಲಿ ಪಡೆದುಕೊಂಡಿತ್ತು. ಅದರಲ್ಲೂ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ನೀಡಿದ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶವನ್ನು ಮತ್ತೊಮ್ಮೆ ಅದ್ಭುತವಾಗಿ ಬಳಸಿಕೊಂಡರು. ಆದರೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ನಿರಾಸೆ ಮೂಡಿಸಿತು. ಸುಲಭವಾಗಿ ಗೆಲುವಿನ ಅವಕಾಶವಿದ್ದ ಪಂದ್ಯ ಕೊನೆಯ ಓವರ್ವರೆಗೂ ಬಂದು ರೋಚಕ ತಿರುವು ಪಡೆಯಿತು. ಅಂತಿಮ ಹಂತದಲ್ಲಿ ಭಾರತ ಗೆಲುವು ದಕ್ಕಿಸಿಕೊಳ್ಳಲು ಯಶಸ್ವಿಯಾಗಿತ್ತು.
ಹೀಗಾಗಿ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. ಶ್ರೇಯಸ್ ಐಯ್ಯರ್ ಸುದೀರ್ಘ ಕಾಲದ ಬಳಿಕ ಟೀಮ್ ಇಂಡಿಯಾ ಪರವಾಗಿ ಆಡುತ್ತಿದ್ದಾರೆ. ಆದಷ್ಟು ಬೇಗನೆ ಲಯವನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ರಿಷಭ್ ಪಂತ್ ತಮ್ಮ ಮೇಲಿರುವ ನಿರೀಕ್ಷೆಗೆ ತಕ್ಕನಾದ ಬ್ಯಾಟಿಂಗ್ ನಡೆಸುವ ಅಗತ್ಯವಿದೆ. ಹಾಗಾದಲ್ಲಿ ಮಾತ್ರವೇ ತಂಡ ಮತ್ತೊಂದು ಅದ್ಭುತವಾದ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಿದೆ.
ಭಾರತ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ಅವೇಶ್ ಖಾನ್ , ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್
ನ್ಯೂಜಿಲೆಂಡ್ ಸಮಫೂರ್ಣ ಸ್ಕ್ವಾಡ್: ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಟಿಮ್ ಸೌಥಿ (ನಾಯಕ), ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಾಡ್ ಆಸ್ಟಲ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ಇಶ್ ಸೋಧಿ, ಜೇಮ್ಸ್ ನೀಶಮ್