
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಕನಸನ್ನು ನನಸು ಮಾಡಿಕೊಳ್ಳಲಾಗದೇ ಟೂರ್ನಿಯಿಂದ ಹೊರಬಂದ ನಂತರ ಇದೀಗ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ಗೆ ವೈಟ್ ವಾಶ್ ಬಳಿದು ಸಾಧನೆ ಮಾಡಿತು. ಈಗ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ಆರಂಭವಾಗಿದ್ದು ಚೊಚ್ಚಲ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ.
ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರಿಷಭ್ ಪಂತ್, ಶಾರ್ದೂಲ್ ಠಾಕೂರ್ ಮತ್ತು ಜಸ್ ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾದ ಯುವ ಆಟಗಾರರ ಮೇಲೆ ಸಾಕಷ್ಟು ದೊಡ್ಡ ಜವಾಬ್ದಾರಿಯಿದೆ. ಅದರಲ್ಲಿಯೂ ಅನುಭವಿ ಆಟಗಾರರಾಗಿರುವ ನಾಯಕ ಅಜಿಂಕ್ಯ ರಹಾನೆ ಮತ್ತು ಉಪ ನಾಯಕ ಚೇತೇಶ್ವರ್ ಪೂಜಾರಾ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇತ್ತು. ಆದರೆ ಈ ಇಬ್ಬರೂ ಆಟಗಾರರು ಸಹ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದ ಕಾರಣ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದರು.
ಹೌದು, ಕಾನ್ಪುರ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಈ ಇಬ್ಬರ ವಿರುದ್ಧ ಕಿಡಿಕಾರಿದ್ದ ನೆಟ್ಟಿಗರು ಇದೀಗ ಎರಡನೇ ದಿನದಂದು ವೃದ್ಧಿಮಾನ್ ಸಾಹ ಕಳಪೆ ಪ್ರದರ್ಶನ ನೀಡಿರುವ ಸಲುವಾಗಿ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶಗಳು ಸಿಗದೇ ಕಂಗೆಟ್ಟಿದ್ದ ವೃದ್ಧಿಮಾನ್ ಸಾಹಗೆ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ತಂಡದ ಪ್ರಮುಖ ವಿಕೆಟ್ ಕೀಪರ್ ರಿಷಭ್ ಪಂತ್ ಅಲಭ್ಯರಾದ ಕಾರಣ ಕಣಕ್ಕಿಳಿಯುವ ಅವಕಾಶ ಸಿಕ್ಕಿತ್ತು. ಹೀಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ವೃದ್ಧಿಮನ್ ಸಹಾ ಎಡವಿದ್ದು ಕೇವಲ 1 ರನ್ ಕಲೆಹಾಕಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು.
ಅತ್ತ ರವಿಚಂದ್ರನ್ ಅಶ್ವಿನ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರೂ ವೃದ್ಧಿಮಾನ್ ಸಹಾ ಒಳ್ಳೆಯ ಪ್ರದರ್ಶನ ನೀಡುವ ಮೂಲಕ ಸಾಥ್ ಕೊಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿಲ್ಲ. ಹೀಗೆ ಈ ಇನ್ನಿಂಗ್ಸ್ನಲ್ಲಿ 1 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿರುವ ವೃದ್ದಿಮಾನ್ ಸಹಾ ವಿರುದ್ಧ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಕಿಡಿಕಾರಿದ್ದು ಈ ಕೆಳಕಂಡಂತೆ ಟ್ವೀಟ್ ಮಾಡಿದ್ದಾರೆ.
ವೃದ್ಧಿಮಾನ್ ಸಹಾ ಕಳಪೆ ಪ್ರದರ್ಶನದ ಕುರಿತು ಕಿಡಿಕಾರಿರುವ ನೆಟ್ಟಿಗನೋರ್ವ ವೃದ್ಧಿಮಾನ್ ಸಹಾನನ್ನು ತಂಡದಿಂದ ಕಿತ್ತೆಸೆದು ಯುವ ಆಟಗಾರ ಕೆ ಎಸ್ ಭರತ್ ಅವರಿಗೆ ಆಡುವ ಅವಕಾಶವನ್ನು ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲಿಯೂ ಕೂಡ ವೃದ್ಧಿಮಾನ್ ಸಹಾ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.
ಕೇವಲ ವಿಕೆಟ್ ಕೀಪಿಂಗ್ ಮಾಡುವುದು ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಕೆಲಸವಾದರೆ, ವೃದ್ಧಿಮನ್ ಸಹಾ ಈಗಲೂ ಕೂಡ ಶ್ರೇಷ್ಠ ಕ್ರಿಕೆಟಿಗ ಎಂದು ನೆಟ್ಟಿಗರೊಬ್ಬರು ವೃದ್ದಿಮಾನ್ ಸಹಾ ಕಾಲನ್ನು ಎಳೆದಿದ್ದಾರೆ.
ಇನ್ನೂ ಕೆಲವೊಂದಿಷ್ಟು ನೆಟ್ಟಿಗರು ವೃದ್ಧಿಮಾನ್ ಸಹಾ ಕ್ರಿಕೆಟ್ ಆಡಿದ್ದು ಮುಗಿಯಿತು ಇನ್ನೇನಿದ್ದರೂ ನಿವೃತ್ತಿ ಘೋಷಿಸುವುದಷ್ಟೇ ಬಾಕಿ ಉಳಿದಿದೆ ಎಂದು ಟ್ವೀಟ್ ಮಾಡುತ್ತಿದ್ದು, ಇಷ್ಟು ದಿನಗಳ ಕಾಲ ನಮ್ಮನ್ನು ಕ್ರಿಕೆಟ್ ಆಡುವ ಮೂಲಕ ರಂಜಿಸಿದ್ದಕ್ಕೆ ಧನ್ಯವಾದಗಳು ಆದಷ್ಟು ಬೇಗ ವಿಕೆಟ್ ಕೀಪಿಂಗ್ ಕೋಚ್ ಆಗಿ ಎಂದು ಬರೆದುಕೊಳ್ಳುತ್ತಿದ್ದಾರೆ.