
ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಸುದೀರ್ಘ ಒಂದು ತಿಂಗಳಿಗೂ ಅಧಿಕ ವಿರಾಮ ಪಡೆದು ಏಷ್ಯಾ ಕಪ್ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಿದ್ದರೂ ತಂಡಕ್ಕೆ ಉಪಯುಕ್ತ ಕೊಡುಗೆ ನೀಡುವಲ್ಲಿ ಸಫಲವಾದರು.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ಸರಾಗವಾಗಿ ರನ್ಗಳಿಸಲು ವಿರಾಟ್ ಕೊಹ್ಲಿ ಪರದಾಡಿದರೂ ನಂತರ ಕೆಲ ಅದ್ಭುತ ಹೊಡೆತಗಳನ್ನು ಬಾರಿಸುವ ಮೂಲಕ ಉತ್ತಮ ಲಯದಲ್ಲಿಯರುವ ಸೂಚನೆ ನೀಡಿದರು. ಆದರೆ ಈ ಹಂತದಲ್ಲಿ ವಿರಾಟ್ ಕೊಹ್ಲಿ ಬೇಡದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಮೂಡಿಸಿದರು. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಕಿಸ್ತಾನದ ಸ್ಪಿನ್ನರ್ ಮೊಹಮ್ಮದ್ ನವಾಜ್ ಎಸೆತದಲ್ಲಿ ಒಂದೇ ವಿಧಾನದಲ್ಲಿ ವಿಕೆಟ್ ಕಳೆದುಕೊಂಡರು. ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಗೆರೆ ದಾಟಿಸುವಲ್ಲಿ ವಿಫಲವಾದ ವಿರಾಟ್ ಕೊಹ್ಲಿ ಇಫ್ತಿಕಾರ್ ಅಹ್ಮದ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ರೀತಿ ವಿಕೆಟ್ ಕಳೆದುಕೊಂಡಿರುವುದಕ್ಕೆ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದು "ಇದು ಅಗತ್ಯವಿಲ್ಲದ ಹೊಡೆತ" ಎಂದಿದ್ದಾರೆ.
"ಇದು ಟಿ20 ಕ್ರಿಕೆಟ್, ಇಲ್ಲಿ ನಿಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಹೊಡೆತಗಳನ್ನು ಬಾರಿಸುವ ಪ್ರಯತ್ನಗಳನ್ನು ನಡೆಸುತ್ತೀರಿ. ಹಿಂದೆ ಆ ರೀತಿಯ ಹೊಡೆತಗಳನ್ನು ಬಾರಿಸಿದ್ದರೂ ಇಂದು ನಿರಾಸೆ ಮೂಡಿಸಿದೆ. ನೀವು ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಔಟ್ ಆಗಿದ್ದರೆ ಅದೇನೂ ಸಮಸ್ಯೆಯಾಗುತ್ತಿರಲಿಲ್ಲ. ಏಕೆಂದರೆ ನೀವು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿರುತ್ತೀರಿ. ಆದರೆ ಇಲ್ಲಿ ನೀವು ಸಿಕ್ಸರ್ ಹೊಡೆಯಲು ಪ್ರಯತ್ನಿಸಲಿಲ್ಲ ಅಥವಾ ಅದಕ್ಕೆ ಬೇಕಾದ ಪೂರ್ಣ ಪ್ರಯತ್ನ ಬರಲಿಲ್ಲ. ಹಾಗಾಗಿ ಇದು ಏನೂ ಅಲ್ಲದ ಹೊಡೆತವಾಗಿತ್ತು. ಆ ಕಾರಣದಿಂದಾಗಿಯೇ ಆತ ಹೆಚ್ಚು ನಿರಾಸೆಗೆ ಒಳಗಾಗಿರಬಹುದು" ಎಂದಿದ್ದಾರೆ ಗೌತಮ್ ಗಂಭೀರ್.
ಪಾಕಿಸ್ತಾನದ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಗಳಿಸಿದರು. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮೊದಲ ಓವರ್ನಲ್ಲಿಯೇ ವಿಕೆಟ್ ಕಳೆದುಕೊಂಡಾಗ ರೋಹಿತ್ ಶರ್ಮಾ ಜೊತೆಗೂಡಿ ನಿರ್ಣಾಯಕ ಆಟವನ್ನು ಪ್ರದರ್ಶಿಸಿದರು. ಆದರೆ ನಾಯಕ ರೋಹಿತ್ ಶರ್ಮಾ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಆಟಗಾರರಿಂದ ಅದ್ಭುತ ಪ್ರದರ್ಶನ ಬಂದಿದ್ದು ತಂಡ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
"ವಿರಾಟ್ ಕೊಹ್ಲಿ ತುಂಬಾನೆ ನಿರಾಶೆಗೆ ಒಳಗಾಗಿರುತ್ತಾರೆ. ಯಾಕೆಂದರೆ ಹಿಂದಿನ ಓವರ್ನಲ್ಲಿ ರೋಹಿತ್ ಶರ್ಮಾ ಕೂಡ ವಿಕೆಟ್ ಬಿದ್ದಿತ್ತು. ಅದರ ನಂತರ ನೀವು ಅಂತಹ ಶಾಟ್ ಅನ್ನು ಆಡಿದರೆ, ಯುವಕನು ಆ ಶಾಟ್ ಅನ್ನು ಆಡದಿರುವುದು ಒಳ್ಳೆಯದು. ಯುವಕನೊಬ್ಬ ಆ ರೀತಿಯ ಶಾಟ್ ಆಡಿದ್ದರೆ ಸಾಕಷ್ಟು ಟೀಕೆಗಳು ಬರುತ್ತಿದ್ದವು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.