ಶನಿವಾರ, ಅಕ್ಟೋಬರ್ 4ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ.
2023ರ ಐಸಿಸಿ ಏಕದಿನ ವಿಶ್ವಕಪ್ನ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವು ಭಾರತ ವಿರುದ್ಧ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ.
ಪಾಕಿಸ್ತಾನ ತಂಡ ನಾಯಕ ಬಾಬರ್ ಅಜಂ ಅವರ ಏಕೈಕ ಅರ್ಧಶತಕದ ನೆರವಿನಿಂದ 42.5 ಓವರ್ಗಳಲ್ಲಿ 191 ರನ್ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆತಿಥೇಯ ಭಾರತ ತಂಡಕ್ಕೆ 192 ರನ್ಗಳ ಸುಲಭ ಗುರಿ ನೀಡಿದೆ.

2023ರ ವಿಶ್ವಕಪ್ ಕ್ರಿಕೆಟ್ನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಹಲವು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಈ ಪಂದ್ಯಕ್ಕೆ ವಿಶೇಷವಾಗಿ ಅಹಮದಾಬಾದ್ನಲ್ಲಿ 1.20 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಟಾಸ್ ವೇಳೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಅಭಿಮಾನಿಗಳು ಪಾಕಿಸ್ತಾನ ನಾಯಕ ಬಾಬರ್ ಅಜಂ ಮಾತನಾಡುವಾಗಲೇ ಜೋರಾಗಿ ಕೇಕೆ ಹಾಕಿದರು. ಇದು ಭಾರತ ತಂಡಕ್ಕೆ ಅಭಿಮಾನಿಗಳ ಬಲವಾಗಿ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವುದು ತೋರಿಸುತ್ತಿತ್ತು.
ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದಾದ ಬಳಿಕ ಪಾಕಿಸ್ತಾನ ತಂಡದ ಆರಂಭಿಕರಾದ ಇಮಾಮ್-ಉಲ್-ಹಕ್ 36 ರನ್ ಹಾಗೂ ಅಬ್ದುಲ್ಲಾ ಶಫೀಕ್ 20 ರನ್ ಗಳಿಸಿ, ಉತ್ತಮ ಅಡಿಪಾಯ ಹಾಕಿದರು.
ನಾಯಕ ಬಾಬರ್ ಅಜಂ ಅವರು ಭಾರತ ವಿರುದ್ಧ ತಮ್ಮ ಮೊದಲ ಅರ್ಧಶತಕ ಬಾರಿಸಿದರು. 58 ಎಸೆತಗಳಲ್ಲಿ 7 ಬೌಂಡರಿ ಸಮೇತ 50 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಮೊಹ್ಮಮದ್ ರಿಜ್ವಾನ್ 69 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 49 ರನ್ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.
ಪಾಕಿಸ್ತಾನ ತಂಡ 73 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಾಗ ತಂಡದ ಸ್ಟಾರ್ ಆಟಗಾರರಾದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಜೊತೆಯಾಟ ನಡೆಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ಈ ಹಂತದಲ್ಲಿ ಡ್ರಿಂಕ್ಸ್ ವಿರಾಮ ಪಡೆಯಲಾಯಿತು. ನಂತರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆದಿಪುರುಷ ಚಿತ್ರದ ಜೈ ಶ್ರೀರಾಮ್ ಹಾಡು ಪ್ರಸಾರ ಮಾಡಲಾಯಿತು.

ಅಲ್ಲಿಯವರೆಗೆ ಮೌನವಾಗಿದ್ದ ಅಭಿಮಾನಿಗಳೆಲ್ಲ, "ಜೈ ಶ್ರೀರಾಮ್... ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಲಾರಂಭಿಸಿದರು. ಭಾರತ ತಂಡ ಪಂದ್ಯಗಳನ್ನು ಆಡಿದಾಗಲೆಲ್ಲಾ 'ವಂದೇ ಮಾತರಂ', 'ಚಕ್ ದೇ ಇಂಡಿಯಾ' ಮತ್ತು 'ಜೈ ಹೋ' ಹಾಡುಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಲಾಗುತ್ತದೆ.
ಆದರೆ, ಇದೀಗ ಅಹಮದಾಬಾದ್ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಅಲ್ಲಿನ ಅಭಿಮಾನಿಗಳು ಜೈ ಶ್ರೀರಾಮ್ ಹಾಡಿಗೆ ದನಿಗೂಡಿಸಿದ್ದಾರೆ. ಇಡೀ ಮೈದಾನವು ಜೈ ಶ್ರೀರಾಮ್ ಘೋಷಣೆಗಳಿಂದ ಮೊಳಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇದೊಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಜೈ ಶ್ರೀರಾಮ್ ಹಾಡು ಪ್ರಸಾರವಾಗಿದ್ದು, ಇದಕ್ಕೆ ಅಭಿಮಾನಿಗಳು ಘೋಷಣೆಗಳನ್ನೂ ಕೂಗಿದರು. ಈ ಮುನ್ನ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ವೇಳೆ ಕೊಲಂಬೊದಲ್ಲಿ ಜೈ ಶ್ರೀರಾಮ್ ಹಾಡನ್ನು ಹಾಕಲಾಗಿತ್ತು.
ಬೌಲಿಂಗ್ನಲ್ಲಿ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 7 ಓವರ್ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 10 ಓವರ್ಗಳಲ್ಲಿ 35 ರನ್ ನೀಡಿ 2 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ 9.5 ಓವರ್ಗಳಲ್ಲಿ 38 ರನ್ ನೀಡಿ 2 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 6 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಸ್ವಲ್ಪ ದುಬಾರಿಯಾದ ಮೊಹಮ್ಮದ್ ಸಿರಾಜ್ 8 ಓವರ್ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆಯಲು ಯಶಸ್ವಿಯಾದರು.