ಈ ಬಾರಿಯ ವಿಶ್ವಕಪ್ ಭಾರತ ಆಯೋಜಿಸುತ್ತಿದ್ದು ಇಡೀ ಟೂರ್ನಿಯ ಬಗ್ಗೆ ಎಷ್ಟು ಚರ್ಚೆಗಳು ನಡೆಯುತ್ತಿದೆಯೋ ಅಷ್ಟೇ ಚರ್ಚೆ ಒಂದು ಪಂದ್ಯದ ಬಗ್ಗೆ ನಡೆಯುತ್ತಿದೆ. ಅದು ಭಾರತ vs ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ. ಸದ್ಯ ನವರಾತ್ರಿಯ ಆರಂಭದ ದಿನವೇ ಈ ಎರಡು ಪಂದ್ಯಗಳು ಮುಖಾಮುಖಿಯಾಗುತ್ತಿರುವ ಕಾರಣ ದಿನಾಂಕದಲ್ಲಿ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ಬೆಳವಣಿಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಈಗಾಗಲೇ ಹೋಟೆಲ್ ರೂಮ್ಗಳನ್ನು ಬುಕ್ ಮಾಡಿರುವ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಈ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಹ್ಮದಾಬಾದ್ನಲ್ಲಿ ಮುಖಾಮುಖಿಯಾಗಲಿದ್ದು ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15ರಂದು ಈ ಪಂದ್ಯ ಆಯೋಜನೆಯಾಗಲಿದೆ. ಆದರೆ ಆ ದಿನವೇ ನವರಾತ್ರಿ ಆರಂಬವಾಗುತ್ತಿದ್ದು ಗುಜರಾತ್ನಲ್ಲಿ ನವರಾತ್ರಿ ಹಬ್ಬವನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಹಾಗಾಗಿ ಭದ್ರತೆಯ ದೃಷ್ಟಿಯಿಂದ ದಿನಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಲಹೆಗಳು ಬಂದಿದೆ. ಹೀಗಾಗಿ ಅಕ್ಟೋಬರ್ 15ರ ಬದಲಿಗೆ ಒಂದು ದಿನ ಮುನ್ನ 14ರಂದು ಈ ಪಂದ್ಯ ಆಯೋಜನೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

ಇನ್ನು ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಲ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅಹ್ಮದಾಬಾದ್ನವರೇ ಆದ ಹರ್ಷ್ ಠಾಕೂರ್ ಎಂಬವರು ಭಾರತ ಹಾಗೂ ಪಾಕಿಸ್ತಾನ ತಂಡಗಳ ಈ ಪಂದ್ಯದ ದಿನಾಂಕ ಬದಲಾವಣೆಯಾದರೆ ಸ್ಥಳೀಯರಿಗೆ ಏನೂ ವ್ಯತ್ಯಾಸವಾಗದಿದ್ದರೂ ದೂರದ ಪ್ರದೇಶಗಳಿಂದ ಈ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಬಹಳ ತೊಂದರೆಯಾಗಲಿದೆ ಎಂದಿದ್ದಾರೆ.
"ಸ್ಥಳೀಯರಿಗಿಂತಲೂ ದೂರದಿಂದ ಪಂದ್ಯ ವೀಕ್ಷಿಸಲು ಬರುವವರಿಗೆ ಇದು ಬಹಳ ತೊಂದರೆಯಾಗಲಿದೆ. 15ನೇ ತಾರೀಕಿಗೆ ಈಗಾಗಲೇ ಬಹುತೇಕ ಹೋಟೆಲ್ಗಳು ಬುಕ್ ಆಗಿವೆ. ಈಗ ಅದು 14ನೇ ತಾರೀಕಿಗೆ ಆದರೆ ಸಹಜವಾಗಿಯೇ ಅವರಿಗೆಲ್ಲಾ ಬಹಳ ಅನನುಕೂಲವಾಗಲಿದೆ" ಎಂದಿದ್ದಾರೆ.
ಇನ್ನು ಸ್ಥಳೀಯರಾದ ಹಾರ್ದಿಕ್ ಪಟೇಲ್ ಎಂಬವರು "ದಿನಾಂಕದಲ್ಲಿ ಬದಲಾವಣೆಯಾಗಲೇಬೇಕು. ಯಾಕೆಂದರೆ ನವರಾತ್ರಿ ಹಾಗೂ ಭಾರತ vs ಪಾಕಿಸ್ತಾನ ಪಂದ್ಯವನ್ನು ಪೊಲೀಸರು ಜೊತೆಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ದಿನಾಂಕದಲ್ಲಿ ಬದಲಾವಣೆ ಮಾಡದಿದ್ದರೆ ಸಿಆರ್ಪಿಎಫ್ ಟ್ರೂಫ್ಗಳ ಸಹಾಯವನ್ನು ಬಿಸಿಸಿಐ ಪಡೆದುಕೊಂಡು ಪಂದ್ಯ ಆಯೋಜನೆ ಮಾಡಬಹುದು" ಎಂದಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಈಗ ನಿಗದಿಯಾಗಿರುವ ದಿನವಾದ ಅಕ್ಟೋಬರ್ 15ರಂದು ಅಹ್ಮದಾಬಾದ್ನ ಬಹುತೇಕ ಹೋಟೆಲ್ನ ರೂಮ್ಗಳು ಬುಕ್ ಆಗಿವೆ. ಅಹ್ಮದಾಬಾದ್ನ ಕೆಲ ದುಬಾರಿ ಹೋಟೆಲ್ಗಳಾದ ನೊವೊಟೆಲ್ ಹೋಟೆಲ್, ಡಬಲ್ ತ್ರಿ ಹೋಟೆಲ್, ಲೆಮನ್ ಟ್ರಿ ಪ್ರೀಮಿಯರ್ ಹಾಘೂ ರ್ಯಾಡಿಸನ್ ಬ್ಲ್ಯೂ ಮೊದಲಾದ ಐಶಾರಾಮಿ ಹೋಟೆಲ್ಗಳು ಕೂಡ ಸಂಪೂರ್ಣವಾಗಿ ಬುಕ್ ಆಗಿವೆ ಎಂದು ಮಾಹಿತಿ ದೊರೆತಿದೆ.
ಇನ್ನು ಇಂದು ನಡೆದ ಬಿಸಿಸಿಐ ಸಭೆಯಲ್ಲಿಯೂ ಭಾರತ vs ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ದಿನಾಂಕದ ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ. ವಿಶ್ವಕಪ್ ಯೋಜನಾ ವಿಭಾಗದ ಜೊತೆಗೆ ಬಿಸಿಸಿಐ ಸಭೆ ಇಂದು ನಡೆಯಿತು. ಇಂದಿನ ಈ ಸಭೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ವಿಚಾರಕ್ಕೆ ಸೀಮಿತವಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮಾಹಿತಿ ನೀಡಲಿದ್ದಾರೆ. ಆದರೆ ಭಾರತ vs ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ದಿನಾಂಕ ಬದಲಾವಣೆಗೆ ಸಂಬಂಧಪಟ್ಟಂತೆ ಬಿಸಿಸಿಐ ಆದಷ್ಟು ಶೀಗ್ರದಲ್ಲಿ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.