ಶನಿವಾರ, ಸೆಪ್ಟೆಂಬರ್ 2ರಂದು ಕ್ಯಾಂಡಿಯ ಪಲ್ಲೆಕೆಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ನ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯವು ಮಳೆಯಿಂದಾಗಿ ಯಾವುದೇ ಫಲಿತಾಂಶ ಕಾಣದೆ ರದ್ದುಗೊಂಡಿತು. ಉಭಯ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಂಡವು.
ಆದರೂ, ಟಾಸ್ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಲು ನಿರ್ಧರಿಸಿ ಪೂರ್ಣ ಇನ್ನಿಂಗ್ಸ್ ಆಡಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ 266 ರನ್ಗಳನ್ನು ಕಲೆಹಾಕಿತು. ಇದರಲ್ಲಿ ಇಶಾನ್ ಕಿಶನ್ (82) ಮತ್ತು ಹಾರ್ದಿಕ್ ಪಾಂಡ್ಯ (87) ಕೊಡುಗೆ ಅಪಾರವಾಗಿತ್ತು.

ಇನ್ನು 2023ರ ಏಷ್ಯಾ ಕಪ್ನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ತೀರಾ ಕಳಪೆಯಾಗಿ ಔಟಾದ ರೋಹಿತ್ ಶರ್ಮಾ ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್ ಅವರು ಟ್ರೋಲ್ ಮಾಡಿದ್ದಾರೆ.
ಮಳೆ ಅಡ್ಡಿಪಡಿಸಿದ ಕಾರಣ, ಸ್ವಲ್ಪ ವಿರಾಮದ ಬಳಿಕ ಹಿಂತಿರುಗಿದ ನಂತರ ಐದನೇ ಓವರ್ನಲ್ಲಿ ಪಾಕಿಸ್ತಾನ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ಅವರ ಬೌಲಿಂಗ್ನಲ್ಲಿ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ 22 ಎಸೆತಗಳಲ್ಲಿ ಎರಡು ಬೌಂಡರಿ ಸಮೇತ 11 ರನ್ ಗಳಿಸಿದರು.
ರೋಹಿತ್ ಶರ್ಮಾ ಔಟಾದ ನಂತರ, ಎಸ್ ಬದ್ರಿನಾಥ್ ಅವರು "ಚೆನ್ನೈ 600028' ಎಂಬ ತಮಿಳು ಚಲನಚಿತ್ರದ ಕ್ಲಿಪ್ನ ಫೋಟೋವನ್ನು ಸಾಮಾಜಿಕ ಮಾಧ್ಯಮ "ಎಕ್ಸ್' (ಟ್ವಿಟ್ಟರ್)ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಾಯಕನ ತಂಡದ ಪ್ರಮುಖ ಬ್ಯಾಟರ್ ಬಾಲ್ ಹೇಗೆ ಗಾಳಿಯಲ್ಲಿ ಚಲಿಸಿತು ಎಂಬುದರ ಸುಳಿವು ಇಲ್ಲದೆ ಬೌಲ್ಡ್ ಆದರು.
ಆ ಚಿತ್ರದಲ್ಲಿ ಶಾಲಾ ಬಾಲಕ ಔಟಾದ ರೀತಿಯಲ್ಲೇ ರೋಹಿತ್ ಶರ್ಮಾ ಔಟಾಗಿರುವುದು ಟ್ರೋಲ್ ಆಗಲು ಕಾರಣವಾಗಿದೆ. ಔಟಾದ ನಂತರ ಶಾಲಾ ಬಾಲಕನ ಹಾವ-ಭಾವ ಮತ್ತು ರೋಹಿತ್ ಶರ್ಮಾರ ಔಟ್ ಅನ್ನು ಹೋಲಿಕೆ ಮಾಡಲಾಗಿದೆ. ಹೈ-ವೋಲ್ಟೇಜ್ ಪಂದ್ಯದಲ್ಲಿ ನಾಯಕ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡಿಲ್ಲ ಎಂಬುದು ಭಾರತೀಯ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಇನ್ನು ಸುಬ್ರಮಣ್ಯಂ ಬದರಿನಾಥ್ 2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಏಳು ಏಕದಿನ ಪಂದ್ಯಗಳಲ್ಲಿ 15.80ರ ಸರಾಸರಿಯಲ್ಲಿ 79 ರನ್ ಗಳಿಸಿದ್ದಾರೆ. ಅವರು ಭಾರತ ತಂಡದ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದರು ಮತ್ತು ಮೂರು ಇನ್ನಿಂಗ್ಸ್ಗಳಲ್ಲಿ 63 ರನ್ ಗಳಿಸಿದರು. ಅಲ್ಲದೆ ಎಸ್ ಬದ್ರಿನಾಥ್ ಭಾರತ ತಂಡದ ಪರ ಏಕೈಕ ಟಿ20 ಪಂದ್ಯ ಆಡಿದ್ದು, 116.21ರ ಸ್ಟ್ರೈಕ್ ರೇಟ್ನಲ್ಲಿ 43 ರನ್ ಗಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು. ನಾಲ್ಕು ವರ್ಷಗಳ ಹಿಂದೆ 2019ರ ವಿಶ್ವಕಪ್ನಲ್ಲಿ ಭಾರತ ತಂಡವು ಕೊನೆಯ ಬಾರಿಗೆ ಪಾಕಿಸ್ತಾನ ತಂಡವನ್ನು ಏಕದಿನ ಪಂದ್ಯದಲ್ಲಿ ಎದುರಿಸಿತ್ತು ಮತ್ತು ರೋಹಿತ್ ಶರ್ಮಾ ಅದ್ಭುತ ಶತಕದೊಂದಿಗೆ ಮಿಂಚಿದ್ದರು.
2023ರ ಏಷ್ಯಾ ಕಪ್ನ ಶನಿವಾರದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ಪಾಕಿಸ್ತಾನದ ಮಾರಕ ವೇಗದ ಬೌಲಿಂಗ್ ವಿಭಾಗದ ವಿರುದ್ಧ ಕಾದು ನೋಡಬೇಕಾದ ಆಟಗಾರನಾಗಿದ್ದರು. ಆದರೆ ಅವರು ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು.
ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ನೇಪಾಳ ವಿರುದ್ಧ ಸೋಮವಾರ, ಸೆಪ್ಟೆಂಬರ್ 4ರಂದು ಕ್ಯಾಂಡಿಯ ಪಲ್ಲೆಕೆಲ್ಲೆ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಸೂಪರ್ 4 ಹಂತ ತಲುಪಲು ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.