India Vs Pakistan Match: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಭಾನುವಾರ ಕೊಲಂಬೊದಲ್ಲಿ ಪಾಕಿಸ್ತಾನದ ವಿರುದ್ಧ ಬಹುನಿರೀಕ್ಷಿತ ಟಿ20 ವಿಶ್ವಕಪ್ 2026ರ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಆದರೆ, ಪಂದ್ಯ ಆರಂಭಕ್ಕೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕೆಲವೇ ಕ್ಷಣಗಳಲ್ಲಿ ಆರ್.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ನಡುವೆ ಟಿ20 ವಿಶ್ವಕಪ್ 2026ರ ಗುಂಪು ಹಂತದ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾತರದಿಂದ ಕಾದು ಕುಳಿತಿದೆ. ಆದರೆ, ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಾದ್ರೆ ಟಾಸ್ ವಿಳಂಬ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಪಂದ್ಯದ ಸಮಯದಲ್ಲಿ ಮಳೆ ಬೀಳುವ ಸಾಧ್ಯತೆ ಶೇಕ 94ರಷ್ಟಿದೆ. ಅಲ್ಲದೇ, ಶ್ರೀಲಂಕಾ ಹವಾಮಾನ ಇಲಾಖೆ ಸಹ ಎಚ್ಚರಿಕೆ ನೀಡಿದ್ದು, ದಕ್ಷಿಣ-ಪೂರ್ವ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗುವ ಸಾಧ್ಯತೆಯಿದೆ. ಇದರ ಪರಿಣಾಮ ಶ್ರೀಲಂಕಾದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದೆ.
ಮಳೆಯಿಂದ ಪಂದ್ಯ ರದ್ದಾದರೆ, ಯಾವುದೇ ಕಾಯ್ದಿರಿಸಿದ ದಿನ ಇರುವುದಿಲ್ಲ. ಆದ್ದರಿಂದ ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಗುತ್ತದೆ. ಇದರಿಂದ ಗುಂಪು ಹಂತದ ಅಂಕಪಟ್ಟಿಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಇನ್ನೂ ಕ್ರಿಕೆಟ್ ಅಭಿಮಾನಿಗಳು ಇದೀಗ ಪಂದ್ಯಕ್ಕೆ ಮಳೆರಾಯನ ಅಡ್ಡಿಯಾಗಬಾರದು. ಭಾರತ-ಪಾಕಿಸ್ತಾನ ನಡುವಿನ ಈ ಮಹತ್ವದ ಪಂದ್ಯ ಸಂಪೂರ್ಣವಾಗಿ ನಡೆಯಲಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ಭಾರೀ ಎರಡು ದೇಶಗಳ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಈ ಹಿನ್ನೆಲೆ ಕಳೆದ ಬಾರಿ ನಡೆದ ಏಷ್ಯಾಪಕ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನದ ಆಟಗಾರರ ಜೊತೆ ಹ್ಯಾಂಡ್ಶೇಕ್ ಮಾಡಿರಲಿಲ್ಲಿ. ಈ ಬಾರಿಯೂ ಅದೇ ಮುಂದುವರೆಯಲಿದ್ಯಾ ಎನ್ನುವ ಪ್ರಶ್ನೆಯನ್ನು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದರು.
ಪಾಕಿಸ್ತಾನ ಆಟಗಾರರೊಂದಿಗೆ ಭಾರತ ತಂಡ ಕೈಕುಲುಕುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಸೂರ್ಯಕುಮಾರ್ ಯಾದವ್ ನಿರಾಕರಿಸಿದರು. ಹಿಂದಿನ ಏಷ್ಯಾಕಪ್ ಪಂದ್ಯದ ವೇಳೆಯೂ ಸಹ ಪಾಕಿಸ್ತಾನ ತಂಡದ ಆಟಗಾರರಿಗೆ ಭಾರತದ ಆಟಗಾರರು ಹ್ಯಾಂಡ್ ಶೇಕ್ ಮಾಡಿರಲಿಲ್ಲ.
ಮತ್ತೊಂದೆಡೆ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮಾತನಾಡಿ, ಬಹಿಷ್ಕಾರದ ಬಳಿಕ ನಡೆಯುತ್ತಿರುವ ಈ ಪಂದ್ಯವನ್ನು ಉತ್ತಮ ರೀತಿಯಲ್ಲಿ ಆಡಬೇಕು. ಹಿಂದಿನ ಪಂದ್ಯದಲ್ಲಿ ಭಾರತ ಕ್ರೀಡಾ ಮನೋಭಾವದಿಂದ ಆಡಲಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜೊತೆಗೆ, ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಉತ್ತಮ ದಾಖಲೆಗಳು ಇಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು.