India Vs Pakistan: ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ 2026ರ ಗುಂಪು ಹಂತದ ತಮ್ಮ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಲು ಸಿದ್ಧವಾಗಿವೆ. ಈ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15ರ ಭಾನುವಾರ ನಡೆಯಲಿದ್ದು, ವೀಕ್ಷಣೆಗೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಆದರೆ, ಈ ನಡುವೆಯೇ ಅಡ್ಡಿಯೊಂದು ಎದುರಾಗಿದ್ದು, ಈ ಮ್ಯಾಚ್ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾದ್ರೆ, ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಾವು ಭಾರತದ ವಿರುದ್ಧ ಟಿ20 ವಿಶ್ವಕಪ್ ಪಂದ್ಯವನ್ನು ಅಡುವುದಿಲ್ಲ ಎನ್ನುವ ನಿಲುವಿನಿಂದ ಪಾಕಿಸ್ತಾನ ಹಿಂದೆ ಸರಿದಿದ್ದು, ಅದರಂತೆಯೇ ಇವರೆಡು ತಂಡಗಳ ನಡುವೆ ಭಾನುವಾರ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆದರೆ, ಮಳೆರಾಯ ಅಡ್ಡಿಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾದ್ರೆ, ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದ್ರೆ ಮುಂದೆ ಏನು ಮಾಡಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಶ್ರೀಲಂಕಾದ ಕೊಲಂಬೊದಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯಾ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಕ್ಯುವೆದರ್ ವರದಿ ಪ್ರಕಾರ, ಭಾನುವಾರ (ಫೆಬ್ರವರಿ 15) ಕೊಲಂಬೊ ನಗರದಲ್ಲಿ ಶೇಕಡ 100ರಷ್ಟು ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಸುಮಾರು ಶೇಕಡ 13ರಷ್ಟು ಮಳೆಯ ಸಾಧ್ಯತೆ ಇದೆ.
ಭಾರತ ಹಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ, ಭಾನುವಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30ಕ್ಕೆ ಆಗಲಿದೆ. ಪಂದ್ಯ ಆರಂಭಕ್ಕೂ ಒಂದು ಗಂಟೆ ಮೊದಲು, ಅಂದರೆ ಸಂಜೆ 6ರ ವೇಳೆಗೆ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡ 49ರಷ್ಟಿದೆ ಎಂದು ತಿಳಿಸಿದೆ.
ಅಕ್ಯುವೆದರ್ ಮುನ್ಸೂಚನೆಯ ಪ್ರಕಾರ, ಸಂಜೆ 7 ಗಂಟೆಗೆ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡ 9ರಷ್ಟು ಇದ್ದು, ಶೇಕಡ 100ರಷ್ಟು ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಿನ ಸಮಯದ ಪ್ರಕಾರ, ರಾತ್ರಿ 11 ಗಂಟೆಯವರೆಗೆ ಇದೇ ರೀತಿಯ ಹವಾಮಾನ ಮುಂದುವರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಪಂದ್ಯವು ಮಳೆಯ ಕಾರಣದಿಂದ ರದ್ದಾದದರೆ, ಭಾರತ ಹಾಗೂ ಪಾಕಿಸ್ತಾನ ಗುಂಪು ಹಂತದ ಪಂದ್ಯಕ್ಕೆ ಮೀಸಲು ದಿನ ಇಲ್ಲದಿರುವುದರಿಂದ, ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗುತ್ತದೆ.
ಇನ್ನೂ ಭಾರತ vs ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್ ಮಾತನಾಡಿ, "ಪಾಕಿಸ್ತಾನ ವಿರುದ್ಧದ ಪಂದ್ಯ ಎಂದರೆ ಎಲ್ಲರಿಗೂ ಸಹಜವಾಗಿಯೇ ವಿಶೇಷವಾದದ್ದು. ಆದ್ದರಿಂದ ನಾವು ಯಾವುದೇ ಭವಿಷ್ಯದ ಬಗ್ಗೆ ಅತಿ ಹೆಚ್ಚು ಯೋಚಿಸುವುದಿಲ್ಲ. ಆದರೆ, ಅಲ್ಲಿ ತಲುಪಿದ ಬಳಿಕ ಪಿಚ್ ಅನ್ನು ಗಮನಿಸುತ್ತೇವೆ. ಆಗ ಯಾವ ರೀತಿಯ ಪಂದ್ಯ ನಡೆಯಬಹುದು ಹಾಗೂ ಯಾವ ಮೊತ್ತ ಉತ್ತಮವಾಗಿರಬಹುದು ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತೇವೆ. ನಂತರ ಅದಕ್ಕೆ ತಕ್ಕಂತೆ ನಾವು ಆಟ ಆಡುತ್ತೇವೆ," ಎಂದು ಹೇಳಿದರು.
ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್ 2026ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಮಾಧ್ಯಮಗಳೊಂದಿಗೆ ಮಾತನಾಡಿದರು. ಪಾಕಿಸ್ತಾನದ ಪಂದ್ಯ ಬಹಿಷ್ಕಾರದ ನಂತರ ನಡೆಯುತ್ತಿರುವ ಈ ಪಂದ್ಯವು ಉತ್ತಮ ಮನೋಭಾವದಲ್ಲಿ ನಡೆಯಬೇಕು ಎಂದು ಅಘಾ ಹೇಳಿದರು. ಜೊತೆಗೆ, ಈ ಹಿಂದೆ ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡದ ದಾಖಲೆ ಉತ್ತಮವಾಗಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು.
ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಅಥವಾ ಸ್ಟಾರ್ ಬ್ಯಾಟರ್ ಬಾಬರ್ ಆಜಮ್ ಅವರ ಫಾರ್ಮ್ ಕುರಿತು ಯಾವುದೇ ಚಿಂತೆ ಇಲ್ಲ. ವಿಶೇಷ ಏನಂದ್ರೆ, ಭಾರತದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಪಂದ್ಯಕ್ಕೆ ಮುನ್ನ ಚೇತರಿಸಿಕೊಂಡು ಆಡಲು ಸಿದ್ಧರಾಗಲಿ ಎಂದು ಆಶಿಸುತ್ತೇವೆ. ಏಕೆಂದರೆ, ನಾವು ಅತ್ಯುತ್ತಮ ಆಟಗಾರರ ವಿರುದ್ಧವೇ ಆಡಲು ಇಷ್ಟಪಡುತ್ತೇವೆ ಎಂದು ಹೇಳಿದರು. ಆದರೆ, ಈ ಹೈವೋಲ್ಟೇಜ್ ಪಂದ್ಯಕ್ಕೆ ಹವಾಮಾನವು ಅಡ್ಡಿಯಾಗುವ ಸಾಧ್ಯತೆ ಇದ್ದು, ಮಳೆಯ ಸಾಧ್ಯತೆ ಶೇಕಡ 60ಕ್ಕಿಂತ ಹೆಚ್ಚಿದೆ ಎನ್ನುವ ಮುನ್ಸೂಚನೆ ಹೊರಬಿದ್ದಿದೆ. ಆದರೆ, ಯಾವುದೇ ಅಡ್ಡಿಯಾಗದೇ ಈ ಪಂದ್ಯ ನಡೆಯಲೇಬೇಕು ಎಂದು ವಿಶ್ವಾದ್ಯಂತ ಅಭಿಮಾನಿಗಳು ಈಗಿನಿಂದಲೇ ದೇವರಲ್ಲಿ ಬೇಡಿಕೊಳ್ಳಲು ಪ್ರಾರಂಭ ಮಾಡಿದ್ದಾರೆ ಎನ್ನಲಾಗಿದೆ.