ಧರ್ಮಶಾಲಾ: ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಭಾರತ ತಂಡಕ್ಕೆ ಅನಿವಾರ್ಯವಾಗಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಪಂದ್ಯ ರೋಚಕತೆ ಹುಟ್ಟಿಸಿದೆ. ಈ ಪಂದ್ಯಕ್ಕಾಗಿ ಭಾರತ ಬದಲಾವಣೆಗಳನ್ನು ಮಾಡವು ಸಾಧ್ಯತೆ ಇದೆ.
ಕಟಕ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 101 ರನ್ ಜಯ ದಾಖಲಿಸಿತ್ತು. ನ್ಯೂ ಚಂಡೀಗಢ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 51 ರನ್ ಗೆಲುವು ಸಾಧಿಸಿತ್ತು. ಹೀಗಾಗಿ ಮೂರನೇ ಪಂದ್ಯ ರೋಚಕತೆ ಹುಟ್ಟಿಸಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದು, ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ.

ಟೀಮ್ ಇಂಡಿಯಾದ ಪರ ಆರಂಭಿಕರಾದ ಶುಭಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ದೊಡ್ಡ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಇನ್ನು ಶುಭಮನ್ ಗಿಲ್ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಅಭಿಷೇಕ್ ಶರ್ಮಾ ಸಹ ಚಿಕ್ಕ ಇನಿಂಗ್ಸ್ ಕಟ್ಟುತ್ತಿದ್ದಾರೆ. ಇವರ ಬ್ಯಾಟ್ನಿಂದ ಈ ಸರಣಿಯಲ್ಲಿ ಯಾವುದೇ ಬಿಗ್ ಇನಿಂಗ್ಸ್ ಬಂದಿಲ್ಲ. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಅನಿವಾರ್ಯತೆ ಇದೆ. ಅಲ್ಲದೆ ಸೂರ್ಯ ಸಮಯೋಚಿತ ಆಟವನ್ನು ಆಡಿ ತಂಡದ ಸ್ಕೋರ್ ಹಿಗ್ಗಿಸಲು ನೆರವಾಗಬೇಕಿದೆ. ಎರಡನೇ ಟಿ20 ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ತಿಲಕ್ ವರ್ಮಾ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಇವರು ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.
ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಮ್ಮ ನೈಜ ಆಟವನ್ನು ಆಡಿ ತಂಡಕ್ಕೆ ಆಧಾರವಾಗಬೇಕಿದೆ. ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜಿತೇಶ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಇನ್ನು ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಸರಿಯಾದ ಲೈನ್ ಹಾಗೂ ಲೆಂಥ್ನಲ್ಲಿ ದಾಳಿ ಸಂಘಟಿಸಿ ಆರಂಭದಲ್ಲಿ ವಿಕೆಟ್ ಬೇಟೆ ನಡೆಸಬೇಕಿದೆ. ಟೀಮ್ ಇಂಡಿಯಾದ ಅನುಭವಿ ಬೌಲರ್ಗಳು ರನ್ಗಳನ್ನು ಧಾರಾಳವಾಗಿ ನೀಡುತ್ತಿರುವುದು ತಂಡಕ್ಕೆ ತಲೆ ನೋವಾಗಿದೆ. ಇನ್ನು ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಶಿಸ್ತು ಬದ್ಧ ದಾಳಿ ನಡೆಸಿ ಬ್ಯಾಟರ್ಗಳನ್ನು ಕಾಡಬೇಕಿದೆ.

ದಕ್ಷಿಣ ಆಫ್ರಿಕಾದ ಪರ ಸ್ಟಾರ್ ಆಟಗಾರ ಕ್ವಿಂಟನ್ ಡಿಕಕ್ ಲಯಕ್ಕೆ ಮರಳಿರುವುದು ತಂಡಕ್ಕೆ ಬೂಸ್ಟ್ ನೀಡಿದಂತೆ ಆಗಿದೆ. ರಿಜಾ ಹೆಂಡ್ರಿಕ್ಸ್, ನಾಯಕ ಐಡೆನ್ ಮಾರ್ಕ್ರಮ್, ಡೇವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್ ಸಮಯೋಚಿತ ಬ್ಯಾಟಿಂಗ್ ನಡೆಸುವ ವಿಶ್ವಾಸ ಹೊಂದಿದ್ದಾರೆ. ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸನ್ ಲಯದಲ್ಲಿದ್ದು, ಬ್ಯಾಟರ್ಗಳಿಗೆ ಕಾಡಬಲ್ಲರು. ಮೂರನೇ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಸರಣಿಯಲ್ಲಿ ಮುನ್ನಡೆ ಸಾಧಿಸುವುದು ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ.