
ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಈ ಟೆಸ್ಟ್ ಸರಣಿ ಪೈಕಿ ಇತ್ತಂಡಗಳ ನಡುವೆ ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳು ಮುಗಿದಿದ್ದು, ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದರೆ, ಜೋಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹರಿಣಗಳು ಜಯವನ್ನು ಸಾಧಿಸಿವೆ.
ಇನ್ನು ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ನಾಯಕ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಆದರೆ ನಂತರ ಗಾಯದ ಸಮಸ್ಯೆಗೆ ಒಳಗಾದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಜೊಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಯಿತು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಿದರು. ಹಾಗೂ ವಿರಾಟ್ ಕೊಹ್ಲಿ ಅಲಭ್ಯರಾದ ಕಾರಣ ಹನುಮ ವಿಹಾರಿಗೆ ಕಣಕ್ಕಿಳಿಯುವ ಅವಕಾಶ ಒದಗಿ ಬಂದಿತ್ತು.
ಪ್ರತಿ ಬಾರಿಯ ಹಾಗೆ ಈ ಬಾರಿಯೂ ಕೂಡ ತಂಡದ ಓರ್ವ ಹಿರಿಯ ಕ್ರಿಕೆಟಿಗ ಗಾಯದ ಸಮಸ್ಯೆ ಕಾರಣದಿಂದಾಗಿ ಹೊರಬಿದ್ದ ತರುವಾಯ ಹನುಮ ವಿಹಾರಿ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡರು. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಹನುಮ ವಿಹಾರಿ ಆ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 20 ಹಾಗೂ ದ್ವಿತೀಯ ಇನ್ನಿಂಗ್ಸ್ನಲ್ಲಿ ಅಜೇಯ 40 ರನ್ ಬಾರಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ ಹನುಮ ವಿಹಾರಿ ವಿಕೆಟ್ ಒಪ್ಪಿಸದೇ ಭಾರತ ತಂಡದ ಪರ ಉತ್ತಮ ಆಟವನ್ನಾಡಲು ಯತ್ನಿಸಿದರು.
ಹೀಗೆ ಸಿಕ್ಕ ಅವಕಾಶ ಒಂದರಲ್ಲಿ ಜವಾಬ್ದಾರಿಯುತ ಆಟವನ್ನು ಆಡಲು ಪ್ರಯತ್ನಿಸಿದ ಹನುಮ ವಿಹಾರಿ ಇದೀಗ ತೃತೀಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕಾರಣ ಹನುಮ ವಿಹಾರಿ ಕೊಹ್ಲಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ಹೀಗೆ ವಿರಾಟ್ ಕೊಹ್ಲಿಗೆ ಸ್ಥಾನ ಬಿಟ್ಟುಕೊಟ್ಟ ಹನುಮ ವಿಹಾರಿ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು ಉತ್ತಮ ಪ್ರದರ್ಶನವನ್ನು ನೀಡುವ ಆಟಗಾರನಿಗೆ ಸರಿಯಾದ ಅವಕಾಶಗಳನ್ನು ನೀಡುವುದಿಲ್ಲ, ಆಗಾಗ ಒಂದೊಂದು ಅವಕಾಶ ನೀಡಿ ಆತನ ವೃತ್ತಿ ಬದುಕನ್ನೇ ಹಾಳು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅದರಲ್ಲಿಯೂ ತಂಡದಲ್ಲಿನ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಹಲವಾರು ತಿಂಗಳುಗಳಿಂದ ಕಳಪೆ ಪ್ರದರ್ಶನ ನೀಡುತ್ತಿದ್ದರೂ ಸಹ ಅವರನ್ನು ತಂಡದಿಂದ ಹೊರಗಿಡದೇ ಹನುಮ ವಿಹಾರಿಯನ್ನು ತಂಡದಿಂದ ಹೊರ ಹಾಕಿದ್ದು ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರು ಬಿಸಿಸಿಐ ವಿರುದ್ಧ ಕಿಡಿಕಾರಿದ್ದು ಹನುಮ ವಿಹಾರಿ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹನುಮ ವಿಹಾರಿಗೆ ವರ್ಷಕ್ಕೆ ಒಂದು ಟೆಸ್ಟ್ ಪಂದ್ಯವನ್ನಾಡಲು ಅವಕಾಶವನ್ನು ನೀಡಲಾಗುತ್ತಿದೆ. ಇದು ನಿಜಕ್ಕೂ ತುಂಬಾ ಬೇಸರದ ವಿಷಯ ಎಂದು ನೆಟ್ಟಿಗನೋರ್ವ ಹನುಮ ವಿಹಾರಿ ಕುರಿತು ಬೇಸರ ವ್ಯಕ್ತಪಡಿಸಿದರು.
ಕಳೆದ ವರ್ಷ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಗಾಯದ ಸಮಸ್ಯೆಯ ನಡುವೆಯೂ ಟೀಮ್ ಇಂಡಿಯಾವನ್ನು ರಕ್ಷಿಸಿದ್ದರು. ಅಂತಹ ಆಟಗಾರ ಈ ವರ್ಷ ಮತ್ತೊಮ್ಮೆ ಭಾರತ ತಂಡದ ಆಡುವ ಬಳಗದಿಂದ ಹೊರಬಿದ್ದಿದ್ದಾರೆ ಎಂದು ಮತ್ತೋರ್ವ ನೆಟ್ಟಿಗ ಬೇಸರ ಹೊರಹಾಕಿದ್ದಾರೆ.