
ಇತ್ತೀಚಿಗಷ್ಟೇ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಎರಡೂ ಸರಣಿಗಳನ್ನು ಕೈವಶ ಮಾಡಿಕೊಂಡ ಟೀಂ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದೆ.
ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ಮೊದಲಿಗೆ ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹಾಗೂ ನಂತರ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯ ಪ್ರಥಮ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ನ್ಯೂಜಿಲೆಂಡ್, ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲುವುದರ ಮೂಲಕ ಟೆಸ್ಟ್ ಸರಣಿಯನ್ನು ಕೂಡ ಕೈಚೆಲ್ಲಿತು. ಹೀಗೆ ನ್ಯೂಜಿಲೆಂಡ್ ವಿರುದ್ಧ ಎರಡೂ ಸರಣಿಗಳನ್ನು ಗೆದ್ದು ಯಶಸ್ಸಿನ ಅಲೆಯಲ್ಲಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು, 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಳನ್ನು ಆಡಲಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪ್ರಥಮ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಅದರೆ ಒಮಿಕ್ರಾನ್ ವೈರಸ್ ಕಾರಣದಿಂದಾಗಿ 9 ದಿನಗಳು ತಡವಾಗಿ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದ್ದು ಡಿಸೆಂಬರ್ 26ರಂದು ಪ್ರಥಮ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಇನ್ನು ಇತ್ತಂಡಗಳ ನಡುವಿನ ಈ ಟೆಸ್ಟ್ ಸರಣಿಗಾಗಿ ಎರಡೂ ತಂಡಗಳು ಈಗಾಗಲೇ ಪ್ರಕಟವಾಗಿದೆ. ಹೌದು, ಬಿಸಿಸಿಐ ಡಿಸೆಂಬರ್ 8ರಂದು 18 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಈ ತಂಡ ಇಂದು ( ಡಿಸೆಂಬರ್ 16 ) ಬಿಸಿಸಿಐ ಆಯೋಜಿಸಿರುವ ಚಾರ್ಟೆಡ್ ವಿಮಾನದಲ್ಲಿ ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದು ಜೋಹಾನ್ಸ್ ಬರ್ಗ್ ತಲುಪಲಿದ್ದಾರೆ.
ಇನ್ನು ಈ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾದಾಗಿನಿಂದ ಬಿಸಿಸಿಐ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕುರಿತಾಗಿ ಹಲವಾರು ಸುದ್ದಿಗಳು ಮತ್ತು ವಿವಾದಗಳು ಹುಟ್ಟಿಕೊಂಡವು. ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದು ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧ ಮುನಿಸಿಕೊಂಡಿದ್ದಾರೆ ಮತ್ತು ಅವರು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೆಲ್ಲ ಸುದ್ದಿಗಳು ಹರಿದಾಡಿದವು. ಹೀಗೆ ಸಾಕಷ್ಟು ವಿವಾದಗಳ ನಂತರ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದು ಸದ್ಯ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಗೆಲುವು ಸಾಧಿಸುವುದರ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಬೇಕಿದೆ.
ಆದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಸುಲಭದ ಮಾತಲ್ಲ. ಏಕೆಂದರೆ ಇದುವರೆಗೂ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಯನ್ನು ಆಡಿರುವ ಟೀಮ್ ಇಂಡಿಯಾ ಇದುವರೆಗೂ ಯಾವುದೇ ಸರಣಿಯಲ್ಲಿಯೂ ಕೂಡ ಜಯವನ್ನು ಸಾಧಿಸಿಯೇ ಇಲ್ಲ. ಹೀಗಾಗಿ ಎಂಟನೇ ಬಾರಿಗೆ ಟೆಸ್ಟ್ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ 7 ಬಾರಿ ಸೋತಿರುವ ಕೆಟ್ಟ ದಾಖಲೆಯ ಹಿನ್ನಡೆಯನ್ನು ಹೊಂದಿದೆ. ಹಾಗೂ ಇಷ್ಟು ವರ್ಷಗಳಲ್ಲಿ ಆಗದೇ ಇರುವಂತಹ ಕೆಲಸವನ್ನು ವಿರಾಟ್ ಕೊಹ್ಲಿ ಹುಡುಗರು ಈ ಬಾರಿ ಮಾಡಲಿದ್ದಾರಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ಆದರೆ ವಿರಾಟ್ ಕೊಹ್ಲಿ ಆಫ್ರಿಕಾ ನೆಲದಲ್ಲಿ ಸರಣಿ ಗೆದ್ದು ಬರಲಿದ್ದೇವೆ ಎಂಬ ವಿಶ್ವಾಸದೊಂದಿಗೆ ಪ್ರವಾಸವನ್ನು ಕೈಗೊಂಡಿದ್ದು ನೂತನ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ತಲುಪಿದ ಕೂಡಲೇ ಭಾರತೀಯ ಆಟಗಾರರನ್ನು ಕ್ವಾರಂಟೈನ್ ನಿಯಮಕ್ಕೆ ಒಳಪಡಿಸಲಿದ್ದು ಕೊರೋನಾ ಟೆಸ್ಟ್ ಫಲಿತಾಂಶದ ವರದಿ ಬಂದ ನಂತರವಷ್ಟೇ ಟೀಮ್ ಇಂಡಿಯಾ ಆಟಗಾರರನ್ನು ಕ್ವಾರಂಟೈನ್ ಆಗಿದ್ದ ಹೊಟೇಲ್ನಿಂದ ಬಿಡುಗಡೆ ಮಾಡಲಿದ್ದೇವೆ ಹಾಗೂ ಈ ಪ್ರಕ್ರಿಯೆ 1 ದಿನಕ್ಕಿಂತ ಅಧಿಕವಾಗಿ ಇರುವುದಿಲ್ಲ ಎಂದು ಸೌತ್ಆಫ್ರಿಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.