ಬೆಂಗಳೂರು, ಆಗಸ್ಟ್ 11: ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರಿಗೆ ಮುಂಬರುವ ಏಕದಿನ ಸರಣಿ ಹಾಗೂ ಟಿ20ಐ ಟೂರ್ನಮೆಂಟ್ ನಿಂದ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ಜಡೇಜ ಬದಲಿಗೆ ಅಕ್ಷರ್ ಪಟೇಲ್ ಗೆ ಅವಕಾಶ
ಆಗಸ್ಟ್ 13ರಂದು ಟೀಂ ಇಂಡಿಯಾ ಆಯ್ಕೆ ಮಾಡಲಾಗುತ್ತದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ವಿರಾಟ್ ಕೊಹ್ಲಿ ಪಡೆ 2-0 ಅಂತರದಿಂದ ಈಗಾಗಲೇ ಗೆದ್ದುಕೊಂಡಿದ್ದು, ಪಲ್ಲಕೆಲ್ಲಿಯಲ್ಲಿ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವಾಡಬೇಕಿದೆ.

ರವೀಂದ್ರ ಜಡೇಜ ಅವರ ಬದಲಿಗೆ ಮೂರನೇ ಟೆಸ್ಟ್ ಪಂದ್ಯಕ್ಕೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೂ, ಜಡೇಜ ಅವರ ಬದಲಿಗೆ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ತಂಡವನ್ನು ಸೇರಿದ್ದಾರೆ. ಆಗಸ್ಟ್ 12ರಂದು ಪಂದ್ಯ ಆರಂಭವಾಗಲಿದೆ.
ಜಡೇಜ ಹಾಗೂ ಅಶ್ವಿನ್ ಅವರು ಕ್ರಮವಾಗಿ 108.2 ಹಾಗೂ 108.3 ಓವರ್ ಗಳನ್ನು ಟೆಸ್ಟ್ ಸರಣಿಯಲ್ಲಿ ಎಸೆದಿದ್ದು, 13 ಹಾಗೂ 11 ವಿಕೆಟ್ ಗಳಿಸಿದ್ದಾರೆ. ಈ ಇಬ್ಬರು ಅಗ್ರಗಣ್ಯ ಸ್ಪಿನ್ನರ್ ಗಳ ಅನುಪಸ್ಥಿತಿಯಲ್ಲಿ ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಕೃನಾಲ್ ಪಾಂಡೆ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ವೇಗಿ ಮೊಹಮ್ಮದ್ ಶಮಿ ಅವರಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕ್ಯಾಂಡಿನಿಂದ ಮೂರು ಗಂಟೆಗಳ ಪ್ರಯಾಣ ಬೆಳೆಸಿದ ನಾಯಕ ವಿರಾಟ್ ಕೊಹ್ಲಿ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮ ಅವರು ಸೀತಾ ಅಮ್ಮ ದೇಗುಲಕ್ಕೆ ಭೇಟಿ ನೀಡಿದ್ದಾರೆ. ತಂಡದ ಮಿಕ್ಕ ಸದಸ್ಯರು ಹೋಟೆಲ್ ನಲ್ಲೇ ಕಾಲ ಕಳೆದಿದ್ದಾರೆ. (ಪಿಟಿಐ)