ಅವಕಾಶಕ್ಕಾಗಿ ಕಾಯುತ್ತಿರುವ ಪಡಿಕ್ಕಲ್: 3ನೇ ಪಂದ್ಯದಲ್ಲೂ ಸ್ಥಾನ ಉಳಿಸಿಕೊಳ್ತಾರಾ ಮನೀಶ್!

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದು ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಎರಡನೇ ಪಂದ್ಯದಲ್ಲಿಯೂ ಯಾವುದೇ ಬದಲಾವಣೆಯನ್ನು ಮಾಡದೆ ತಂಡವನ್ನು ಕಣಕ್ಕಿಳಿಸಲಾಗಿತ್ತು. ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಸಾಕಷ್ಟು ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಮೂರು ಪಂದ್ಯಗಳ ಸರಣಿಯನ್ನು ಭಾರತ ಗೆದ್ದುಕೊಂಡಿದ್ದು ಮೂರನೇ ಪಂದ್ಯದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ಅದರಲ್ಲೂ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಎಲ್ಲಾ ಆಟಗಾರರಿಗೂ ಅವಕಾಶವನ್ನು ನೀಡುವ ಆಶಯವನ್ನು ಹೊಂದಿದ್ದಾರೆ.

ಅವಕಾಶ ಪಡೆದು ಮಿಂಚಿದ ಪೃಥ್ವಿ ಶಾ
ಆರಂಭಿಕನಾಗಿ ಪೃಥ್ವಿ ಶಾ ಮೊದಲ ಪಂದ್ಯದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಎರಡನೇ ಪಂದ್ಯದ ಆರಂಭದಲ್ಲೂ ಸ್ಪೋಟಕವಾಗಿ ಆಡುವ ಮುನ್ಸೂಚನೆ ನೀಡಿದರಾದರೂ ಅದು ಹೆಚ್ಚು ಹೊತ್ತು ಸಾಗಲಿಲ್ಲ. ಪೃಥ್ವಿ ಶಾ ಎರಡು ಅವಕಾಶಗಳನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮೂರನೇ ಪಂದ್ಯದಲ್ಲಿ ಆರಂಭಿಕನಾಗಿ ದೇವದತ್ ಪಡಿಕ್ಕಲ್ ಅವಕಾಶವನ್ನು ಪಡೆದರೆ ಅಚ್ಚರಿಯಿಲ್ಲ.

ಉತ್ತಮ ಪ್ರದರ್ಶನ ನೀಡಿದ ಮನೀಶ್
ಇನ್ನು ಮತ್ತೋರ್ವ ಕನ್ನಡಿಗ ಆಟಗಾರ ಮನೀಶ್ ಪಾಂಡೆ ಮೊದಲ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು. ಎರಡನೇ ಪಂದ್ಯದಲ್ಲಿಯೂ ಕಣಕ್ಕಿಳಿದ ಮನೀಶ್ ಪಾಂಡೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿದರು. ಭಾರತ ತಂಡ ತನ್ನ ಆರಂಭಿಕ ಮೂರು ವಿಕೆಟ್ಗಳನ್ನು ಶೀಘ್ರವಾಗಿ ಕಳೆದುಕೊಂಡಿದ್ದರಿಂದ ಮನೀಶ್ ಪಾಂಡೆ ಮೇಲೆ ಹೆಚ್ಚಿನ ಜವಾಬ್ಧಾರಿಯಿತ್ತು. ಅದಕ್ಕೆ ಪೂರಕವಾದ ಪ್ರದರ್ಶನ ನೀಡುತ್ತಿದ್ದರೂ ದುರದೃಷ್ಟಕರ ರೀತಿಯಲ್ಲಿ ಮನೀಶ್ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಳ್ಳಬೇಕಾಯಿತು.

ಉತ್ತಮ ಜೊತೆಯಾಟ
ಸಂಕಷ್ಟದ ಸಂದರ್ಭದಲ್ಲಿ ಮನೀಶ್ ಪಾಂಡೆ 31 ಎಸೆತಗಳಲ್ಲಿ 37 ರನ್ಗಳಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಜೊತೆಗೆ 50 ರನ್ಗಳ ಮಹತ್ವದ ಜೊತೆಯಾಟವನ್ನು ಕೂಡ ನೀಡಿದ್ದರು. ಈ ಜೊತೆಯಾಟ ಭಾರತ ರೋಚಕ ಗೆಲುವನ್ನು ಸಾಧಿಸುವಲ್ಲಿಯೂ ಮಹತ್ವದ ಪಾತ್ರವಹಿಸಿತ್ತು ಎಂಬುದು ಗಮನಾರ್ಹವಾಗಿದೆ.

ಮನೀಶ್ ಅನುಭವ ತಂಡಕ್ಕೆ ಉಪಯುಕ್ತ
ಮೂರನೇ ಪಂದ್ಯದಲ್ಲಿಯೂ ಮನೀಶ್ ಪಾಂಡೆ ಸ್ಥಾನವನ್ನು ಸಂಪಾದಿಸುತ್ತಾರಾ ಎಂಬುದನ್ನು ಈ ಹಂತದಲ್ಲಿ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಯುವ ಆಟಗಾರರೇ ತುಂಬಿರುವ ತಂಡದಲ್ಲಿ ಮನೀಶ್ ಪಾಂಡೆ ಅನುಭವ ತಂಡಕ್ಕೆ ಹೆಚ್ಚಿನ ಬಲ ನೀಡುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications