
ಮುಂಬೈ, ಜೂನ್ 15: ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿಗೆ ತೆರಳಲಿರುವ ಟೀಮ್ ಇಂಡಿಯಾ ತಂಡದ ಎಲ್ಲಾ ಸದಸ್ಯರು ಮುಂಬೈಗೆ ಬಂದಿಳಿದಿದ್ದಾರೆ ಎಂದು ಮಂಗಳವಾರ ಬಿಸಿಸಿಐ ಮಾಹಿತಿಯನ್ನು ನೀಡಿದೆ. ಶಿಖರ್ ಧವನ್ ನೇತೃತ್ವದ 20 ಸದಸ್ಯರ ತಂಡ ಮುಂಬೈನಲ್ಲಿ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಲಿದೆ.
ಶ್ರೀಲಂಕಾ ವಿರುದ್ಧ ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಂತರ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಧವನ್ ನೇತೃತ್ವದ ತಂಡ ಲಂಕಾ ಪಡೆಯನ್ನು ಎದುರಿಸಲಿದೆ. ಮೊದಲ ಏಕದಿನ ಪಂದ್ಯ ಜುಲೈ 13ರಂದು ನಡೆಯಲಿದೆ.
ಮುಂಬೈಗೆ ಟೀಮ್ ಇಂಡಿಯಾ ಆಟಗಾರರು ಬಂದಿಳಿದಿರುವ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ನಾಯಕ ಶಿಖರ್ ಧವನ್ ಉಪನಾಯಕ ಭುವನೇಶ್ವರ್ ಕುಮಾರ್ ಸಹಿತ ಕನ್ನಡಿಗ ದೇವದತ್ ಪಡಿಕ್ಕಲ್, ಪಾಂಡ್ಯ ಸೋದರರು ಶ್ರೇಯಸ್ ಐಯ್ಯರ್ ಸಹಿತ ಇನ್ನೂ ಕೆಲ ಸದಸ್ಯರ ಸೆಲ್ಫಿಗಳನ್ನು ಬಿಸಿಸಿಐ ಹಂಚಿಕೊಂಡಿದೆ.
ಇದಕ್ಕೂ ಮುನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿ ತೆರಳಲಿದ್ದಾರೆ ಎಂದು ಖಚಿತಪಡಿಸಿದ್ದರು. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಮುಖ್ಯ ಕೋಚ್ ರವಿ ಶಾಸ್ತ್ರಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಪಂದ್ಯಗಳು ಜುಲೈ 13, 16 ಮತ್ತು 18 ರಂದು ನಡೆಯಲಿದೆ. ಮೂರು ಪಂದ್ಯಗಳ ಟಿ20 ಜುಲೈ 21 ರಿಂದ ಆರಂಭವಾಗಲಿದ್ದು ಎರಡನೇ ಪಂದ್ಯ ಜುಲೈ 23 ಹಾಗೂ ಅಂತಿಮ ಪಂದ್ಯ ಜುಲೈ 25 ರಂದು ನಡೆಯಲಿದೆ.
ಶ್ರೀಲಂಕಾಗೆ ಪ್ರವಾಸಕ್ಕೆ ತೆರಳಲಿರುವ ಟೀಮ್ ಇಂಡಿಯಾ ತಂಡ: ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್) ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಾಹರ್, ನವದೀಪ್ ಸೈನಿ, ಚೇತನ್ ಸಕರಿಯಾ