ಬೆಂಗಳೂರು, ಜುಲೈ 8: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೀಮಿತ ಓವರ್ಗಳ ಸರಣಿಗೆ ದಿನಗಣನೆ ಆರಂಭವಾಗಿದೆ. ಒಂದೆಡೆ ವಿರಾಟ್ ಕೊಹ್ಲಿ ನೇತೃತ್ವದ ತಂಡ ಇಂಗ್ಲೆಂಡ್ನಲ್ಲಿದ್ದು ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ಶಿಖರ್ ಧವನ್ ನೇತೃತ್ವದ ಯುವ ತಂಡ ಶ್ರೀಲಂಕಾ ಪ್ರವಾಸಕ್ಕೆ ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಕೆಲವರು ಟೀಕೆಯನ್ನು ವ್ಯಕ್ತಪಡಿಸಿದ್ದರು. ಶ್ರೀಲಂಕಾಗೆ ಭಾರತ ದ್ವಿತೀಯ ದರ್ಜೆಯ ತಂಡವನ್ನು ಕಳುಹಿಸಿದೆ ಎಂಬ ಅಸಮಾಧಾನಗಳು ವ್ಯಕ್ತವಾಗಿತ್ತು.
ಈ ಮಧ್ಯೆ ಭಾರತ ಹಾಗೂ ಶ್ರೀಲಂಕಾ ನಡುವಿನ ಈ ಸರಣಿಯಿಂದಾಗಿ ಶ್ರಿಲಂಕಾ ಕ್ರಿಕೆಟ್ ಮಂಡಳಿ ಗಳಿಸುವ ಲಾಭ ಎಷ್ಟು ಎಂದು ತಿಳಿದುಕೊಂಡರೆ ನೀವು ಅಚ್ಚರಿ ಪಡಲಿದ್ದೀರಿ. ಸೂಪರ್ ಸ್ಟಾರ್ ಆಟಗಾರರಿಲ್ಲದ ಭಾರತ ತಂಡ ಪ್ರವಾಸಕ್ಕೆ ತೆರಳುತ್ತಿದ್ದರೂ ಶ್ರೀಲಂಕಾ ಕ್ರಿಕೆಟ್ ಈ ಸರಣಿಯಿಂದಾಗಿ ದಾಖಲೆ ಮೊತ್ತದ ಲಾಭವನ್ನು ಗಳಿಸಲಿದೆ.ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವ ಅವರೇ ಕೆಲ ಮಾಹಿತಿಗಳನ್ನು ನೀಡಿದ್ದಾರೆ.
ಭಾರತ vs ಶ್ರೀಲಂಕಾ: ಋತುರಾಜ್ ಗಾಯಕ್ವಾಡ್ಗೆ ಕನ್ನಡ ಮೇಷ್ಟ್ರಾದ ಕೆ ಗೌತಮ್
ಭಾರತ ಹಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಒಟ್ಟು ಈ ಆರು ಪಂದ್ಯಗಳಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ 12 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಲಿದೆ. ಅಂದರೆ ರೂಪಾಯಿ ಲೆಕ್ಕದಲ್ಲಿ ಇದು 89 ಕೋಟಿ ರೂಪಾಯಿಗೂ ಅಧಿಕವಾಗಿರಲಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಗಳಿಸುವ ಈ ಆದಾಯದಲ್ಲಿ ಹೆಚ್ಚಿನ ಮೊತ್ತ ಪ್ರಸಾರದ ಹಕ್ಕಿನಿಂದ ಬರಲಿದೆ. ಸೋನಿ ಸ್ಪೋರ್ಟ್ಸ್ ಹಾಗೂ ಇತರ ಜಾಹೀರಾತುದಾರರಿಂದ ಈ ಆದಾಯವನ್ನು ಗಳಿಸಲಿದೆ ಶ್ರೀಲಂಕಾ ಕ್ರಿಕೆಟ್ ಮಂಡಳಿ. ಭಾರತದ ಕಡೆಯಿಂದ ಕೆಲ ಪ್ರಮುಖ ಪ್ರಾಯೋಜಕರು ಈ ಸರಣಿಗೆ ಸಾಥ್ ನೀಡಲಿದ್ದಾರೆ. ಮೂಲಗಳ ಪ್ರಕಾರ 'ಅನ್ಅಕಾಡೆಮಿ' ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಶೀರ್ಷಿಕೆ ಪ್ರಯೋಜಕರಾಗಲಿ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಟಿ20 ಸರಣಿಗೆ 'ಕಾಯಿನ್ ಡಿಸಿಎಕ್ಸ್' ಶೀರ್ಷಿಕೆ ಪ್ರಯೋಜಕರಾಗುವ ಸಾಧ್ಯತೆಯಿದೆ. ಅಲ್ಲದೆ 'ಡ್ರೀಮ್ 11' ಸ್ಕೋಡಾ ಪ್ರಾಯೋಜಕರಾಗಿ ಸಾಥ್ ನೀಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಶ್ರೀಲಂಕಾ ವಿರುದ್ಧದ ಈ ಸರಣಿಯಲ್ಲಿ ಮೊದಲಿಗೆ 3 ಪಂದ್ಯಗಳನ್ನು ಆಡಿಸಲು ನಿರ್ಧರಿಸಲಾಗಿತ್ತು. ಆದರೆ ನಂತರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐ ಜೊತೆಗೆ ಮಾತುಕತೆಯನ್ನು ನಡೆಸಿ ಆರು ಪಂದ್ಯಗಳ ಸರಣಿಗೆ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜುಲೈ 13ರಿಂದ ಸರಣಿ ಆರಂಭವಾಗಲಿದೆ.