
ಕೊಲಂಬೋ, ಜುಲೈ 29: ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ನಿರ್ಣಾಯಕ ಪಂದ್ಯ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ್ದು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಭಾರತದ ಬ್ಯಾಟಿಂಗ್ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದೆ. ನಿರೀಕ್ಷೆ ಮೂಡಿಸಿದ್ದ ಯುವ ಬ್ಯಾಟ್ಸ್ಮನ್ಗಳು ನಿರೀಕ್ಷೆಯ ಮಟ್ಟವನ್ನು ತಲುಪಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಈ ಪಂದ್ಯದಲ್ಲಿ ನಾಯಕ ಅನುಭವಿ ಶಿಖರ್ ಧವನ್ ಗೋಲ್ಡನ್ ಡಕ್ ಆಗುವ ಮೂಲಕ ಭಾರತ ತಂಡದ ಕುಸಿತಕ್ಕೆ ಮುನ್ನುಡಿ ಬರೆದರು. ಈ ಕುಸಿತವನ್ನು ತಡೆದು ತಂಡವನ್ನು ಮೇಲೆತ್ತಲು ಯಾವ ಬ್ಯಾಟ್ಸ್ಮನ್ನಿಂದಲೂ ಸಾಧ್ಯವಾಗಲಿಲ್ಲ. ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ಈ ಪಂದ್ಯದಲ್ಲಿಯೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಜು ಸ್ಯಾಮ್ಸನ್, ನಿತೀಶ್ ರಾಣಾ ಕೂಡ ಕಳಪೆ ಆಟವನ್ನು ಪ್ರದರ್ಶಿಸಿ ಆಘಾತವುಂಟು ಮಾಡಿದರು.
ಇಂದಿನ ಪಂದ್ಯದಲ್ಲಿ ನಾಯಕ ಧವನ್ ಹಾಗೂ ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ನ ಸನಿಹದಲ್ಲಿ ವಿಶ್ವಕಪ್ನ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಶಿಖರ್ ಧವನ್ಗೆ ಈ ಸರಣಿ ಅತ್ಯುತ್ತಮ ಅವಕಾಶ ಎಂದು ಬಣ್ಣಿಸಲಾಗಿತ್ತು. ಆದರೆ ಧವನ್ ಟಿ20 ಕ್ರಿಕೆಟ್ಗೆ ಪೂರಕವಾದ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಧವನ್ 40+ ರನ್ ಗಳಿಸಿದ್ದರಾದರೂ ಸ್ಟ್ರೈಕ್ರೇಟ್ ಕಡಿಮೆಯಿತ್ತು. ನಿರ್ಣಾಯಕ ಪಂದ್ಯದಲ್ಲಿ ಮೊದಲ ಎಸೆತಕ್ಕೇ ಧವನ್ ಬಲಿಯಾಗಿದ್ದಾರೆ. ಈ ಪ್ರದರ್ಶನದಿಂದಾಗಿ ಧವನ್ ಟಿ20 ವೃತ್ತಿ ಜೀವನ ಅಂತ್ಯವಾಯಿತು ಎನ್ನುತ್ತಿದ್ದಾರೆ.
ಧವನ್ ನೀಡಿದ ಈ ಪ್ರದರ್ಶನಕ್ಕೆ ನೆಟ್ಟಿಗರು ಬೇಸತ್ತಿದ್ದಾರೆ. ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಕೆಲಸವನ್ನು ಧವನ್ ಸರಳಗೊಳಿಸಿದರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
ಇನ್ನು ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಟಿ20ಯಲ್ಲಿ ತಮ್ಮ ಕಳಪೆ ಪ್ರದರ್ಶನವನ್ನು ಸಂಜು ಮುಂದುವರಿಸಿದ್ದಾರೆ. ಸಂಜು ಬಗ್ಗೆಯೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನ ಟ್ವಿಟ್ಟರ್ನಲ್ಲಿ ವ್ಯಕ್ತವಾಗುತ್ತಿದೆ. ತಮಗೆ ದೊರೆತ ಅತ್ಯುತ್ತಮ ಅವಕಾಶವನ್ನು ಸಂಜು ವ್ಯರ್ಥಗೊಳಿಸಿದರು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇನ್ನೂ ಕೆಲವರು ಸಂಜು ಸ್ಯಾಮ್ಸನ್ ಐಪಿಎಲ್ನಲ್ಲಿ ಮಾತ್ರವೇ ಆಡಲು ಸೂಕ್ತ ಎನ್ನುತ್ತಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ:
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಹರ್, ಸಂದೀಪ್ ವಾರಿಯರ್, ಚೇತನ್ ಸಕರಿಯಾ, ವರುಣ್ ಚಕ್ರವರ್ತಿ
ಶ್ರೀಲಂಕಾ ಆಡುವ ಬಳಗ:
ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಸದೀರಾ ಸಮರವಿಕ್ರಮ, ಪಾತುಮ್ ನಿಸ್ಸಂಕಾ, ದಸುನ್ ಶನಕ (ನಾಯಕ), ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ದನಂಜಯ, ದುಷ್ಮಂತ ಚಮೀರಾ