
ವಿಶಾಖಪಟ್ನಂ, ಅಕ್ಟೋಬರ್ 24: ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿ ಬುಧವಾರ (ಅಕ್ಟೋಬರ್ 24) ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಎರಡನೇ ಏಕದಿನ ಪಂದ್ಯ 'ಟೈ'ನೊಂದಿಗೆ ಅಂತ್ಯ ಕಂಡಿದೆ. ರೋಚಕ ಹಂತಕ್ಕೆ ತಲುಪಿದ ಪಂದ್ಯವನ್ನು ವಿಂಡೀಸ್ ಆಟಗಾರ ಶೈ ಹೋಪ್ ಬೌಂಡರಿ ಬಾರಿಸಿ ಸಮಬಲ ಗೊಳಿಸಿದರು. ವೆಸ್ಟ್ ಇಂಡೀಸ್ ಗೆ ಗೆಲ್ಲಲು ಕೊನೆಯ ಬಾಲ್ ಗೆ 5 ರನ್ನುಗಳ ಅವಶ್ಯಕತೆಯಿತ್ತು!
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾ (4 ರನ್), ಶಿಖರ್ ಧವನ್ (29) ವಿಕೆಟ್ ಕಳೆದು ಆಘಾತ ಅನುಭವಿಸಿದರೂ ಮತ್ತೆ ಚೇತರಿಸಿಕೊಂಡಿತು. ಅಂಬಾಟಿ ರಾಯುಡು 73, ಕೊಹ್ಲಿ ಭರ್ಜರಿ 157 ರನ್ ಸೇರಿಸಿದ್ದರಿಂದ ದೇಸಿ ತಂಡ 50 ಓವರ್ ಗಳಲ್ಲಿ 6 ವಿಕೆಟ್ ಕಳೆದು 321 ರನ್ ಪೇರಿಸಿತ್ತು.
ಕೊಹ್ಲಿ, ರಾಯುಡು ಬಿಟ್ಟರೆ ಭಾರತ ಪರ ಶಿಖರ್ ಧವನ್ 29, ಎಂಎಸ್ ಧೋನಿ 20, ರಿಷಬ್ ಪಂತ್ 17, ರವೀಂದ್ರ ಜಡೇಜಾ 13 ರನ್ ಸೇರಿಸಿದ್ದೇ ಹೆಚ್ಚೆನಿಸಿತು. ಅದರಲ್ಲೂ ರೋಹಿತ್ ಶರ್ಮಾ 4 ರನ್ನಿಗೆ ವಿಕೆಟ್ ಒಪ್ಪಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯ್ತು. ಹೀಗಾಗಿ ನಾಯಕ ಕೊಹ್ಲಿಯ ಹೋರಾಟ ಫಲಿತಾಂಶವನ್ನು ಹಿಡಿದಿಟ್ಟುಕೊಳ್ಳಲಷ್ಟೇ ನೆರವಾಯ್ತು.
ವೆಸ್ಟ್ ಇಂಡೀಸ್ ಪರ ವಿಕೆಟ್ ಕಾವಲು ನಿಂತ ಶೈ ಹೋಪ್ ಅಜೇಯ 123 ರನ್ ಸೇರಿಸಿದರೆ, ಮತ್ತೊಬ್ಬ ಬ್ಯಾಟ್ಸ್ಮನ್ ಹೆಟ್ಮರ್ 94 ರನ್, ಚಂದ್ರಪಾಲ್ ಹೇಮರಾಜ್ 32 ರನ್ ಕೊಡುಗೆ ತಂಡಕ್ಕೆ ಬಲ ತುಂಬಿತು. ಕುಲದೀಪ್ ಯಾದವ್ 67 ರನ್ನಿಗೆ 3 ವಿಕೆಟ್ ಪಡೆದರಾದರೂ, ತಂಡಕ್ಕೆ ಗೆಲುವು ಒಲಿಯಲಿಲ್ಲ.
ವೆಸ್ಟ್ ಇಂಡೀಸ್ ತಂಡ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 321 ರನ್ ಪೇರಿಸಿತು. ಅಂತೂ ಮೊದಲ ಪಂದ್ಯದ ಸೋಲಿಗೆ ಕೆರಿಬಿಯನ್ನರು ತಿರುಗೇಟು ನೀಡಿದ್ದು ಸುಳ್ಳಲ್ಲ. ಹಾಗಂತ ಇತ್ತ ಭಾರತ ಸೋಲಲೂ ಇಲ್ಲಬಿಡಿ! ಇದರೊಂದಿಗೆ ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ 1-0ಯ ಮುನ್ನಡೆಯಲ್ಲೇ ಇದೆ.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ಆರ್), ರಿಷಬ್ ಪಂತ್, ರವೀಂದ್ರ ಜಡೇಜಾ, ಉಮೇಶ್ ಯಾದವ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್.
ವಿಂಡೀಸ್ ತಂಡ: ಕೀರಾನ್ ಪೊವೆಲ್, ಚಂದ್ರಪಾಲ್ ಹೇಮ್ರಾಜ್, ಶೈ ಹೋಪ್ (W), ಮರ್ಲಾನ್ ಸ್ಯಾಮುಯೆಲ್ಸ್, ಶಿಮ್ರಾನ್ ಹೆಟ್ಮರ್, ರೋವ್ಮನ್ ಪೊವೆಲ್, ಜಾಸನ್ ಹೋಲ್ಡರ್ (ಸಿ), ಆಶ್ಲೆ ನರ್ಸ್, ದೇವೇಂದ್ರ ಬಿಶೂ, ಕೆಮರ್ ರೊಚ್, ಒಬೇಡ್ ಮೆಕಾಯ್.