ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಒಂದು ಗೆಲುವು ಒಂದು ಸೋಲಿನ ರುಚಿ ಕಂಡಿದ್ದು ಸರಣಿ ಈಗ 1-1 ಅಂತರದಿಂದ ಸಮಬಲದಲ್ಲಿದೆ. ಹೀಗಾಗಿ ಸರಣಿಯ ಕೊನೆಯ ಪಂದ್ಯ ನಿರ್ಣಾಯಕವೆನಿಸಿದ್ದು ಕುತೂಹಲ ಮೂಡಿಸಿದೆ.
ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಡುವ ಬಳಗದಿಂದ ಹೊರಗುಳಿದಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ಗೆ ಆಡುವ ಬಳಗದಲ್ಲಿ ಸ್ಥಾನ ದೊರೆತಿತ್ತು. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು ಸೋಲು ಅನುಭವಿಸಿತ್ತು. ಹೀಗಾಗಿ ಕೊನೆಯು ಪಂದ್ಯದಲ್ಲಿ ಟೀಮ್ ಇಂಡಿಯಾದ ರಣತಂತ್ರದ ಬಗ್ಗೆಯೂ ಕುತೂಹಲ ಮೂಡಿಸಿದೆ.

ಇನ್ನು ಸರಣಿಯ ಕೊನೆಯ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಆಡುವ ಬಳಗಕ್ಕೆ ಮರಳುವ ಸಾಧ್ಯತೆಯಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದ್ದು ಸಂಜು ಸ್ಯಾಮ್ಸನ್ ಅಥವಾ ಸೂರ್ಯಕುಮಾರ್ ಯಾದವ್ಗೆ ಮತ್ತೊಂದು ಅವಕಾಶ ದೊರೆಯುವ ನಿರೀಕ್ಷೆಯಿದೆ.
ಪಂದ್ಯದ ದಿನವಾದ ಆಗಸ್ಟ್ ಒಂದರಂದು ಟ್ರಿನಿಡಾಡ್ನಲ್ಲಿ ಮುಂಜಾನೆ ಬಿಸಿಲಿನಿಂದ ಕೂಡಿರಲಿದ್ದು ಮೋಡದ ವಾತಾವರಣವೂ ಇರಲಿದೆ. ಆದರೆ ಸಮಯಕಳೆದಂತೆ ಹವಾಮಾನ ಪರಿಸ್ಥಿತಿ ಕೆಟ್ಟದಾಗುವ ಸಾಧ್ಯತೆಯಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ(ಭಾರತೀಯ ಕಾಲಮಾನ ಸಂಜೆ 6:30) ಗುಡುಗು ಸಹಿತಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಟಾಸ್ ತಡವಾಗುವ ಸಾಧ್ಯತೆಯೂ ಇದೆ. ಮಧ್ಯಾಹ್ನ ಸ್ಥಳೀಯ ಕಾಲಮಾನ 4 ಗಂಟೆ (ಭಾರತೀಯ ಕಾಲಮಾನ ರಾತ್ರಿ 1:30 AM) ವರೆಗೆ ಳೆಯಾಗುವ ಸಾಧ್ಯತೆ 55% ಕ್ಕಿಂತ ಹೆಚ್ಚಿದೆ. ಇನ್ನು ಪಂದ್ಯದ ಎರಡನೇ ಮತ್ತು ಮೂರನೇ ಗಂಟೆಯಲ್ಲಿ ಶೇ.73ರಷ್ಟು ಮಳೆಯಾಗುವ ಸಾಧ್ಯತೆಯೂ ಇದೆ ಎನ್ನುತ್ತಿದೆ ಟ್ರಿನಿಡಾಡ್ನ ಹವಾಮಾನ ವರದಿ.
ಇನ್ನು ದಿನವಿಡೀ ತಾಪಮಾನವು ಸುಮಾರು 32-34 ಡಿಗ್ರಿ ಸೆಲ್ಸಿಯಸ್ನಲ್ಲಿ ಇರುವ ಸಾಧ್ಯತೆಯಿದೆ. ಗಾಳಿ ಗಂಟೆಗೆ 18 ಕಿಮೀ ವೇಗದಲ್ಲಿ ಬೀಸುತ್ತದೆ ಮತ್ತು ಆರ್ದ್ರತೆಯ ಮಟ್ಟವು 73% ವರೆಗೆ ತಲುಪುತ್ತದೆ. ಈ ಸವಾಲಿನ ಪರಿಸ್ಥಿತಿಗಳ ನಡುವೆಯೂ ಉಭಯ ತಂಡಗಳು ಈ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಲು ಉತ್ಸುಕವಾಗಿವೆ.
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ, ಜೇಡನ್ ಸೀಲ್ಸ್, ಕೆವಿನ್ ಸಿಂಕ್ಲೇರ್, ಡೊಮಿನಿಕ್ ಡ್ರೇಕ್ಸ್, ರೋವ್ಮನ್ ಪೊವೆಲ್, ಓಶೇನ್ ಥಾಮಸ್
ಟೀಮ್ ಇಂಡಿಯಾ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ಯುಜ್ವೇಂದ್ರ ಚಾಹಲ್, ರುತುರಾಜ್ ಗಾಯಕ್ವಾಡ್