ತಿರುವನಂತಪುರಂ, ನವೆಂಬರ್ 1: ಕೇರಳದ ತಿರುವನಂತಪುರಂನ ಗ್ರೀನ್ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು (ನವೆಂಬರ್ 1) ನಡೆದ 5ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ ಸುಲಭ ಜಯ ಸಾಧಿಸಿದೆ. ಈ ಪಂದ್ಯದೊಂದಿಗೆ ಏಕದಿನ ಸರಣಿಯನ್ನು 3-1ರಿಂದ ಭಾರತ ಗೆದ್ದುಕೊಂಡಿದೆ.
ಸ್ಕೋರ್ ಕಾರ್ಡ್ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವೆಸ್ಟ್ ಇಂಡೀಸ್ ಸಾಲು ಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಬಂತು. ರವಿಂದ್ರ ಜಡೇಜಾ 4, ಖಲೀಲ್ ಅಹ್ಮದ್, ಜಸ್ ಪ್ರೀತ್ ಬೂಮ್ರಾ ತಲಾ 2 ವಿಕೆಟ್ ಪಡೆದು ಕೆರಿಬಿಯನ್ನರನ್ನು ಕಾಡಿದರು. ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಗಳಿಂದ ಪ್ರತಿರೋಧವೇ ಬರಲಿಲ್ಲ. ಜೇಸನ್ ಹೋಲ್ಡರ್ 25 ರನ್ ಗಳಿಸಿದ್ದೇ ಹೆಚ್ಚೆನಿಸಿತು. ಇಂಡೀಸ್ 31.5 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 104 ರನ್ ಪೇರಿಸಿತ್ತು.
105 ರನ್ ಸುಲಭ ಗುರಿ ಬೆನ್ನತ್ತಿದ ಭಾರತ ಪರ ರೋಹಿತ್ ಶರ್ಮಾ ಸಿಕ್ಸ್ ಸುರಿಮಳೆಗರೆದರು. 5 ಬೌಂಡರಿ, 4 ಸಿಕ್ಸರ್ ಬಾರಿಸಿದ ರೋಹಿತ್ ಅರ್ಧ ಶತಕ (63 ರನ್) ಸೇರಿಸಿದರೆ, ನಾಯಕ ವಿರಾಟ್ ಕೊಹ್ಲಿ 33 ರನ್ ಕಲೆ ಹಾಕಿದರು. ಭಾರತ 14.5 ಓವರ್ ಗೆ 1 ವಿಕೆಟ್ ಕಳೆದು 105 ರನ್ ನೊಂದಿಗೆ ಗೆಲುವನ್ನಾಚರಿಸಿತು.
ಮುಂಬೈಯಲ್ಲಿ ಅಕ್ಟೋಬರ್ 29ರಂದು ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ, ರೋಹಿತ್ ಶರ್ಮಾ, ಅಂಬಾಟಿ ರಾಯುಡು ಶತಕದ ನೆರವಿನೊಂದಿಗೆ ಪ್ರವಾಸಿಗರ ವಿರುದ್ಧ 224 ರನ್ ಅಮೋಘ ಗೆಲುವನ್ನಾಚರಿಸಿತ್ತು.
ಆದರೆ ಅಕ್ಟೋಬರ್ 24ರಂದು ನಡೆದಿದ್ದ ದ್ವಿತೀಯ ಏಕದಿನ ಪಂದ್ಯ ಟೈ ಆಗಿದ್ದರಿಂದ ಭಾರತಕ್ಕೆ ಕೊನೆಯ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ವಿಂಡೀಸ್ ಒಂದುವೇಳೆ ಕೊನೆಯ ಪಂದ್ಯ ಗೆದ್ದಿದ್ದರೆ ಸರಣಿ 2-2ರಿಂದ ಸಮಬಲಗೊಳ್ಳುತ್ತಿತ್ತು.
ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ರವೀಂದ್ರ ಜಡೇಜಾ ಪಡೆದುಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿ ನಾಯಕ ವಿರಾಟ್ ಕೊಹ್ಲಿಗೆ ಒಲಿಯಿತು. ಟ್ರೋಫಿ ಹಿಡಿದು ಸಂಭ್ರಮಾಚರಿಸುವುದಕ್ಕೂ ಮೊದಲು ಕೊಹ್ಲಿ ರೋಹಿತ್ ಕೈಗೆ, ರೋಹಿತ್ ಅವರು ಖಲೀಲ್ ಅಹ್ಮದ್ ಕೈಗೆ ಟ್ರೋಫಿಯನ್ನು ಹಸ್ತಾಂತರಿಸಿದ ದೃಶ್ಯ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಳಿಸಿತು. ಇನ್ನು ವಿಂಡೀಸ್ ವಿರುದ್ಧ ಭಾರತ ನವೆಂಬರ್ 4ರಂದು ಮೊದಲ ಟಿ20 ಪಂದ್ಯವನ್ನಾಡಲಿದೆ.
ವಿಂಡೀಸ್: ಕೀರನ್ ಪೊವೆಲ್, ಶೈ ಹೋಪ್ (W), ಮರ್ಲಾನ್ ಸ್ಯಾಮುಯೆಲ್ಸ್, ಶಿಮ್ರಾನ್ ಹೆಟ್ಮರ್, ರೋವ್ಮನ್ ಪೊವೆಲ್, ಜೇಸನ್ ಹೋಲ್ಡರ್ (ಸಿ), ಫ್ಯಾಬಿಯನ್ ಅಲೆನ್, ದೇವೇಂದ್ರ ಬಿಶೂ, ಕೀಮೊ ಪಾಲ್, ಕೆಮರ್ ರೋಚ್, ಒಶೇನ್ ಥಾಮಸ್.
ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ಡಬ್ಲ್ಯೂ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಕೆ ಖಲೀಲ್ ಅಹ್ಮದ್, ಜಸ್ಪ್ರಿತ್ ಬೂಮ್ರಾ.