
ನವದೆಹಲಿ, ಅಕ್ಟೋಬರ್ 27: ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ ಅವರಿಗೆ ಆಯ್ಕೆ ಸಮಿತಿ ಅಚ್ಚರಿಯ ಕರೆ ನೀಡಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಪಂದ್ಯಗಳಿಗೆ ತಂಡ ಘೋಷಣೆ ಮಾಡಿದಾಗ ಅದರಲ್ಲಿ ತಮ್ಮ ಹೆಸರು ಇಲ್ಲದ್ದನ್ನು ಕಂಡು ಬೇಸರಗೊಂಡಿದ್ದ ಕೇದಾರ್ ಜಾಧವ್ ಅವರಿಗೆ ಸಂತಸದ ಸುದ್ದಿ ಸಿಕ್ಕಿದೆ.
ಜಾಧವ್ ಏಷ್ಯಾ ಕಪ್ ಫೈನಲ್ ವೇಳೆ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಆಯ್ಕೆ ಮಾಡಿರಲಿಲ್ಲ.
ಗುರುವಾರ ಉಳಿದ ಮೂರು ಪಂದ್ಯಗಳಿಗೆ 15 ಆಟಗಾರರ ತಂಡ ಪ್ರಕಟಿಸಿದಾಗಲೂ ಅವರ ಹೆಸರು ಇರಲಿಲ್ಲ. ಫಿಟ್ನೆಸ್ ಸಮಸ್ಯೆ ಕಾರಣದಿಂದ ಅವರನ್ನು ಪರಿಗಣಿಸಿರಲಿಲ್ಲ ಎಂದು ಆಯ್ಕೆ ಸಮಿತಿ ಹೇಳಿತ್ತು.
ಅದೇ ದಿನ ದೇವಧರ್ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಆಡಿದ್ದ ಜಾಧವ್, ಕೇವಲ 25 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ತಾವು ಆಡಲು ಫಿಟ್ ಆಗಿರುವುದನ್ನು ಸಾಬೀತುಪಡಿಸಿದ್ದರು.
ತಾವು ಫಿಟ್ ಇರುವುದನ್ನು ಜಾಧವ್ ಸಾಬೀತು ಮಾಡಿರುವುದರಿಂದ ಅವರನ್ನು ನಾಲ್ಕು ಮತ್ತು ಐದನೇ ಏಕದಿನ ಪಂದ್ಯಗಳಿಗಾಗಿ ತಂಡಕ್ಕೆ ಆಯ್ಕೆ ಮಾಡಿರುವುದಾಗಿ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ತಿಳಿಸಿದ್ದಾರೆ.
'ನನ್ನನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದು ಗೊತ್ತಾಗಿಲ್ಲ. ನಾನು ಪರೀಕ್ಷೆಯನ್ನು ಪಾಸ್ ಮಾಡಿದ್ದೇನೆ. ಅದಕ್ಕಾಗಿಯೇ ಇಂದಿನ ಪಂದ್ಯವನ್ನು ಆಡಿದ್ದು' ಎಂದು ದೇವಧರ್ ಟ್ರೋಫಿಯ ಪಂದ್ಯದ ಬಳಿಕ ಜಾಧವ್ ಬೇಸರ ವ್ಯಕ್ತಪಡಿಸಿದ್ದರು.
ಮಧ್ಯಮ ಕ್ರಮಾಂಕದಲ್ಲಿ ವೇಗದ ಆಟಕ್ಕೆ ಹೆಸರಾಗಿರುವ ಜಾಧವ್, ಸ್ಪಿನ್ ಬೌಲಿಂಗ್ನಲ್ಲಿಯೂ ತಂಡಕ್ಕೆ ಹಲವು ಬಾರಿ ನೆರವಾಗಿದ್ದಾರೆ.