
ಮುಂಬೈ, ಅಕ್ಟೋಬರ್ 12: ಮುಂಬೈಯ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದ ಭಾರತ vs ವೆಸ್ಟ್ ಇಂಡೀಸ್ ನಾಲ್ಕನೇ ಏಕದಿನ ಪಂದ್ಯವನ್ನು ಮುಂಬೈಯ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(ಸಿಸಿಐ)ಗೆ ಸ್ಥಳಾಂತರಿಸಲಾಗಿರುವುದಾಗಿ ಬಿಸಿಸಿಐ ಶುಕ್ರವಾರ (ಅಕ್ಟೋಬರ್ 12) ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಐ ಉಪಾಧ್ಯಕ್ಷ ಕಪಿಲ್ ಮಲ್ಹೋತ್ರ, 'ಪಂದ್ಯದ ಆತಿಥ್ಯ ವಹಿಸಲು ನಮಗೆ ಖುಷಿಯೆನಿಸಿದೆ. ಐತಿಹಾಸಿಕ ಬ್ರಬೌರ್ನೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ನಾವಂತೂ ಯಾವತ್ತಿಗೂ ಇಷ್ಟೇ ಸಂಭ್ರಮದಿಂದ ತಯಾರಾಗಿರುತ್ತೇವೆ' ಎಂದಿದ್ದಾರೆ.
'ಗೌರವಾನ್ವಿತ ಸುಪ್ರೀಮ್ ಕೋರ್ಟ್ ನಿಂದ ಆರಿಸಲ್ಪಟ್ಟಿರುವ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಮಾರ್ಗದರ್ಶನದ ಮೇರೆಗೆ ಅಕ್ಟೋಬರ್ 29ರಂದು ನಡೆಯಲಿದ್ದ ಭಾರತ-ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಮುಂಬೈಯ ವಾಂಖೇಡೆ ಕ್ರೀಡಾಂಗಣದಿಂದ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ' ಎಂದು ಬಿಸಿಸಿಐ ಹೇಳಿಕೆ ನೀಡಿದೆ.
ಪಂದ್ಯವನ್ನು ಸ್ಥಳಾಂತರಗೊಳಿಸಲು ನಿಜವಾದ ಕಾರಣವೇನು ಅನ್ನೋದು ಸ್ಪಷ್ಟಗೊಂಡಿಲ್ಲ. ಇತ್ತೀಚಿಗೆ ಬಿಸಿಸಿಐಯಿಂದ ಅಳವಡಿಸಲ್ಪಟ್ಟಿರುವ ಹೊಸ ಸಂವಿಧಾನಕ್ಕೆ ಸಂಬಂಧಿಸಿ ಈ ಪ್ರಕ್ರಿಯೆ ನಡೆದಿರುಬಹುದು ಎನ್ನಲಾಗಿದೆ.
'ಇದರಲ್ಲಿ ಬೇರಾವ ವಿಚಾರವೂ ಇಲ್ಲ. ಪಂದ್ಯ ನಡೆಸಲು ನೀವು ತಯಾರಿದ್ದೀರ ಅಂತ ಬಿಸಿಸಿಐ ನಮ್ಮನ್ನು ಕೇಳಿತು. ನಾವು ತಯಾರಾಗಿದ್ದೇವೆ ಎಂದು ತಿಳಿಸಿದ್ದೇವಷ್ಟೇ. ಹೀಗಾಗಿ ಪಂದ್ಯ ಇಲ್ಲಿ ನಡೆಸಲು ಉದ್ದೇಶಿಸಲಾಗಿದೆ' ಎಂದು ಸಿಸಿಐ ಸದಸ್ಯರೊಬ್ಬರು ತಿಳಿಸಿದ್ದಾರೆ.