ಕೋಲ್ಕತ್ತಾ: ಟಿ20 ವಿಶ್ವಕಪ್ನ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಕ್ವಾರ್ಟರ್ ಫೈನಲ್ನಂತೆ ಕಾಣಿಸಿಕೊಂಡಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಸೂಪರ್ 8 ಹಂತದ ಮೊದಲ ಗುಂಪಿನಿಂದ ಸೆಮೀಸ್ ಹಂತಕ್ಕೆ ಪ್ರವೇಶಿಸಿದೆ. ಆದರೆ ಇನ್ನೊಂದು ತಂಡ ಯಾವುದು ಎಂಬ ಪ್ರಶ್ನೆಗೆ ಭಾನುವಾರ ಉತ್ತರ ಸಿಗಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿದೆ. ಅಲ್ಲದೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ತಂಡವನ್ನೇ ಟೀಮ್ ಇಂಡಿಯಾ ಮಹತ್ವದ ಪಂದ್ಯದಲ್ಲಿ ಕಣಕ್ಕೆ ಇಳಿಸಲು ನಿರ್ಧರಿಸಿದೆ. ಟೀಮ್ ಇಂಡಿಯಾ ಮಹತ್ವದ ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಈ ಮೈದಾನದಲ್ಲಿ ಇಬ್ಬನಿ ಎರಡನೇ ಇನಿಂಗ್ಸ್ನಲ್ಲಿ ತನ್ನ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲೇ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಟಾಸ್ ಗೆಲ್ಲುತ್ತಿದ್ದಂತೆ ಸೂರ್ಯಕುಮಾರ್ ಯಾದವ್, ಪಿಚ್ ಚೆನ್ನಾಗಿದೆ. ಚೇಸ್ ಮಾಡಲು ಈ ಮೈದಾನ ಒಳ್ಳೆಯ ಅಂಗಳ. ಸಮಯ ಕಳೆದಂತೆ ವಿಕೆಟ್ ಬ್ಯಾಟಿಂಗ್ಗೆ ಮತ್ತಷ್ಟು ಪೂರಕವಾಗಲಿದೆ. ಎರಡನೇ ಇನಿಂಗ್ಸ್ನಲ್ಲಿ ಇಬ್ಬನಿ ಕಾಣಿಸಿಕೊಳ್ಳುವುದರಿಂದ ಬೌಲಿಂಗ್ ಉತ್ತಮ ಆಯ್ಕೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಅವರಿಗಾಗಿ ಉತ್ತಮ ಪ್ರದರ್ಶನ ನೀಡುತ್ತೇವೆ. ತಂಡದ ಆಟಗಾರರ ಮನೋಬಲ ಚೆನ್ನಾಗಿ ಎಂದು ತಿಳಿಸಿದ್ದಾರೆ.
ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ವೆಸ್ಟ್ ಇಂಡೀಸ್ ತಂಡ: ರೋಸ್ಟನ್ ಚೇಸ್, ಶಾಯ್ ಹೋಪ್ (ನಾಯಕ ಮತ್ತು ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಮ್ಯಾಥ್ಯೂ ಫೋರ್ಡ್, ಗುಡಾಕೇಶ್ ಮೋಟಿ, ಅಕೀಲ್ ಹೊಸೈನ್, ಶಮರ್ ಜೋಸೆಫ್.