
ಆ್ಯಂಟಿಗುವಾ, ಆಗಸ್ಟ್ 22: ಟೆಸ್ಟ್ ಚಾಂಪಿಯನ್ಷಿಪ್ ಭಾಗವಾಗಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸಜ್ಜಾಗಿವೆ. ಮೊದಲ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಬಳಗವನ್ನು ಸೋಲಿಸಲು ಅವಕಾಶವಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ನಾಯಕ ರಾಮ್ನರೇಶ್ ಸರ್ವಣ್ ಹೇಳಿದ್ದಾರೆ.
'ನಾವು ಒಟ್ಟಾಗಿ ಆಡಿದರೆ, ಭಾರತವನ್ನು ಸೋಲಿಸಲು ಅವಕಾಶವಿದೆ. ನಮ್ಮಲ್ಲಿ ವೈಯಕ್ತಿಕ ಪ್ರತಿಭೆಗಳಿದ್ದಾರೆ, ಆದರೆ ಇಲ್ಲಿ ಗೆಲ್ಲಬೇಕಾದರೆ ಒಗ್ಗಟ್ಟಾಗಿ ಆಡಬೇಕಿದೆ. ನಾವೊಂದು ತಂಡವಾಗಿ ಆಡಿದರೆ ಗೆಲ್ಲಲು ಅವಕಾಶ ತುಂಬಾ ಇದೆ,' ಎಂದು ಸರ್ವಣ್ ವಿವರಿಸಿದ್ದಾರೆ.
ಇಂಡೋ-ಗಯಾನೀಸ್ ಆಟಗಾರರಾಗಿರುವ ರಾಮ್ನರೇಶ್ ಸರ್ವಣ್ ಸದ್ಯ ಟೆಸ್ಟ್ ಸರಣಿಗೂ ಮುನ್ನ ವಿಂಡೀಸ್ ತಂಡದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯ ಗುರುವಾರ (ಆಗಸ್ಟ್ 22) ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ 7 pmಗೆ ಆರಂಭಗೊಳ್ಳಲಿದೆ.
ಆ್ಯಂಟಿಗುವಾ ಟೆಸ್ಟ್ನಲ್ಲಿ ಭಾರತದ ವಿಕೆಟ್ಗಳನ್ನು ಬೇಗನೆ ಪಡೆಯುವುದು ಸರ್ವಣ್ ಯೋಜನೆ. 'ಮೊದಲ ಟೆಸ್ಟ್ನಲ್ಲಿ ಭಾರತದ ವಿಕೆಟ್ಗಳನ್ನು ಬೇಗನೆ ಉರುಳಿಸುತ್ತಾ ಸಾಗಬೇಕಿದೆ. ವಿಕೆಟ್ ಸಿಗಲಿ-ಬಿಡಲಿ, ಆದರೆ ಆರಂಭದಿಂದಲೂ ನಾವು ಚೆನ್ನಾಗಿ ಆಡಬೇಕು. ವಿಂಡೀಸ್ ತಂಡದಲ್ಲಿ ಯೋಜನೆಗಳಿವೆ. ಆ ಯೋಜನೆಗಳನ್ನು ಕಾರ್ಯಗತ ಗೊಳಿಸಿದರೆ ಖಂಡಿತಾ ನಾವು ಗೆಲ್ಲುತ್ತೇವೆ,' ಎಂದು ಸರ್ವಣ್ ಅಭಿಪ್ರಾಯಿಸಿದ್ದಾರೆ.