
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಸಂವಾದವನ್ನು ನಡೆಸಿದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್ ಯಾವ ಪ್ರಮಾಣದಲ್ಲಿ ಆವರಿಸಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.
90ರ ದಶಕದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಟೀಮ್ ಇಂಡಿಯಾ ಸಾಕಷ್ಟು ನೆಚ್ಚಿಕೊಂಡಿತ್ತು ಎಂದು ಈ ಸಂದರ್ಭದಲ್ಲಿ ಮಂಜ್ರೇಕರ್ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಆಟದ ಮೇಲೆ ಟೀಮ್ ಇಂಡಿಯಾ ಅವಲಂಬಿತವಾಗಿತ್ತು ಎಂದು ಸಂವಾದದಲ್ಲಿ ಅಭಿಪ್ರಾಯಪಟ್ಟಿದ್ದಾರೆ ಮಂಜ್ರೇಕರ್.
ಈ ಮಾತಿಗೆ ಮಂಜ್ರೇಕರ್ 1996ರ ಸೆಮಿಫೈನಲ್ ಪಂದ್ಯವನ್ನು ಉದಾಹರಣೆಯಾಗಿ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ವಿಕೆಟ್ ಪತನದ ನಂತರ ಭಾರತ ಕ್ರಿಕೆಟ್ ತಂಡ ಎದುರಾಳಿ ಶ್ರೀಲಂಕಾಗೆ ಯಾವುದೇ ರೀತಿಯಲ್ಲೂ ಪ್ರತಿರೋಧವನ್ನು ತೋರದೆ ವಿಕೆಟ್ ಒಪ್ಪಿಸುತ್ತಾ ಹೋದ ಸಂದರ್ಭವನ್ನು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಆಗಮನದವರೆಗೂ ಭಾರತ ಕ್ರಿಕೆಟ್ ತಂಡ ರಕ್ಷಣಾತ್ಮಕ ಆಟದ ಮೊರೆ ಹೋಗುತ್ತಿತ್ತು, ಆದರೆ ಸಚಿನ್ ತೆಂಡೂಲ್ಕರ್ ಅದನ್ನು ಬದಲಾಯಿಸಿದರು. ಬೌಲರ್ಗಳನ್ನು ಬೆನ್ನತ್ತಿ ಬಾರಿಸಲು ಸಚಿನ್ ಹಿಂದೇಟಿ ಹಾಕುತ್ತಿರಲಿಲ್ಲ. ಮತ್ತು 90ರ ದಶಕದಲ್ಲಿ ಅತ್ಯುತ್ತಮ ರೀತಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಸಚಿನ್ ಯಶಸ್ವಿಯಾಗಿದ್ದರು ಎಂದು ಮಂಜ್ರೇಕರ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಕೆರಿಯರ್ನ ಉದ್ದಕ್ಕೂ ಅತ್ಯಂತ ಕಡಿಮೆ ಹಿನ್ನಡೆಯನ್ನು ಕಂಡರು, ನಿರಂತರವಾಗಿ ಸ್ಥಿರತೆಯನ್ನು ಅವರು ಕಾಪಾಡಿಕೊಳ್ಳುವಲ್ಲಿ ವೃತ್ತಿ ಜೀವನದುದ್ದಕ್ಕೂ ಯಶಸ್ವಿಯಾಗಿದ್ದರು. ಇದು ಸಚಿನ್ ತೆಂಡೂಲ್ಕರ್ ಅವರ ಶ್ರೇಷ್ಠತೆ ಎಂದು ಸಂಜಯ್ ಮಂಜ್ರೇಕರ್ ಈ ಸಂವಾದದಲ್ಲಿ ಹೇಳಿದ್ದಾರೆ.